Monday, 29 November 2021

ಸಂವಿಧಾನ ಮತ್ತು ಮಕ್ಕಳ ದಿನಾಚರಣೆ

ಸಂವಿಧಾನ ಮತ್ತು ಮಕ್ಕಳ ದಿನಾಚರಣೆ
ಶಾಲೆ ಒಂದು ಸೌಹಾರ್ದ ತಾಣ; ಸಹಬಾಳ್ವೆ, ಭ್ರಾತೃತ್ವದ ಗೂಡು. ನಾಳಿನ ಸಮತೆಯ ಸಮಾಜ ನಿರ್ಮಾಣವಾಗುವುದು ಶಾಲೆಯಲ್ಲಿ. ಇಂತಹ ತಾಣದಲ್ಲಿಂದು ನಾವು ಸಂವಿಧಾನ ದಿನ ಮತ್ತು ಮಕ್ಕಳ ದಿನವನ್ನು ಜೊತೆ ಜೊತೆಯಾಗಿ ಆಚರಿಸಿದೆವು. ಭಾರತದ ಪ್ರಜೆಗಳಾದ ನಾವು 1949ರ ನವೆಂಬರ್ 26ರಂದು ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನದ ನೆನಪಿಗಾಗಿ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆವು. ಕಾರ್ಯಕ್ರಮದ ಆಶಯವಾಗಿ ಮಕ್ಕಳು ಕುವೆಂಪು ಅವರ “ಓ ನನ್ನ ಚೇತನ” ಗೀತೆಯನ್ನು ಹಾಡಿದರು. ಗುರುಗಳು ಸಂವಿಧಾನದ ಕುರಿತು ಹೇಳಿದರು. ಮಕ್ಕಳ ದಿನದ ಸಂಭ್ರಮದ ಚಿತ್ರಗಳು

Saturday, 20 November 2021

ಶಿಕ್ಷಕರ ಕನ್ನಡ ಹಬ್ಬ

 

ಶಿಕ್ಷಕರ ಕನ್ನಡ ಹಬ್ಬ:

ನಂಜನಗೂಡಿನಲ್ಲೊಂದು ನುಡಿ ಹಬ್ಬ

‘ಕನ್ನಡ ಉಳಿಸಿ ಕನ್ನಡ ಬೆಳೆಸಿ’ ಎಂಬ ಕೂಗು ನವೆಂಬರ್ ತಿಂಗಳಲ್ಲಿ ಕಿವಿ ಮೇಲೆ ಬಿದ್ದು ಹೋಗುತ್ತದೆ. ಅದು ಮತ್ತೆ ಕೇಳಬೇಕೆಂದರೆ ನವೆಂಬರ್ ಬರುವ ತನಕ ಕಾಯಬೇಕು. ಉಳಿಸಿ ಬೆಳೆಸಿ ಕೂಗಿನ ಆಚೆಗೆ ಕನ್ನಡದ ಹಬ್ಬ ಪ್ರತಿದಿನ ನಡೆಯುವುದು ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ. ಲಕ್ಷ ಲಕ್ಷ ಮಕ್ಕಳು, ಸಾವಿರ ಸಾವಿರ ಶಿಕ್ಷಕರು ಯಾವ ಘೋಷಣೆಯ ಕೂಗದೆ ಕನ್ನಡ ನುಡಿಯ ಜೀವಂತಿಕೆಯಂತೆ ಬದುಕುತ್ತಿದ್ದಾರೆ.

ಕನ್ನಡ ನುಡಿಯ ಕುರಿತು ಹಲವು ಸಮ್ಮೇಳನಗಳು ನಡೆಯುತ್ತವೆ. ಆದರೆ ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಬಿತ್ತುವ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ  ಕನ್ನಡ ಹಬ್ಬಗಳು ನಡೆಯುವುದು ಅಪರೂಪದಲ್ಲಿ ಅಪರೂಪವೇ ಸರಿ. ನಂಜನಗೂಡಿನಲ್ಲಿ ಅಂಥದ್ದೊಂದು ಅದ್ಭುತ ಪ್ರಯತ್ನ ಇದೇ ನವೆಂಬರ್ 19ರಂದು ನಡೆಯಿತು.

ಉತ್ಸಾಹಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್.ರಾಜು ಅವರ ಕನಸು ‘ಶಿಕ್ಷಕರ ಕನ್ನಡ ಹಬ್ಬ’ ಯಶಸ್ವಿಯಾಗಿ ನಡೆಯಿತು. “ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು” ಎಂಬ ವರಕವಿ ಬೇಂದ್ರೆಯವರ ಮಾತಿನಂತೆ ತಾಲೂಕಿನಲ್ಲಿ ಕನ್ನಡ ಕಲಿಸುವ ಕನ್ನಡ ಶಾಲೆಯ ನಾನೂರಕ್ಕೂ ಅಧಿಕ ಶಿಕ್ಷಕರು ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ.



ದೀಪ ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡಿದ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಶಂಕರ್ ಮಾತನಾಡಿ ‘ಕನ್ನಡ ಎಂದೂ ತಲೆ ತಗ್ಗಿಸುವ ಭಾಶೆಯಲ್ಲ ಆದರೂ ಕನ್ನಡ ಮಾತನಾಡುವುದಕ್ಕೆ ನಮಗೆ ಕೀಳರಿಮೆ. ಕನ್ನಡತನ ಬಹಳ ದೊಡ್ಡದು. ಭಾಶೆ ಒಂದು ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಶಿಕ್ಷಕರ ಕೆಲಸ ಬಹಳ ಪರಿಶ್ರಮದ್ದು. ಬಳಪ ಹೇಗೆ ಹಿಡಿಯಬೇಕೆಂಬುದು ತಿಳಿಯದ, ಸುರಿಯುವ ಗೊಣ್ಣೆಯ ಒರೆಸಿಕೊಳ್ಳಲುಬಾರದ ಪುಟ್ಟ ಪುಟ್ಟ ಮಕ್ಕಳ ಕೈ ಹಿಡಿದು ತಿದ್ದಿ ತೀಡಿ ಕಲಿಸುವ ಕೆಲಸ ಶ್ರೇಷ್ಠವಾದುದು.  ಯಾರು ಮಾತೃಭಾಶೆಯಲ್ಲಿ ಸಮರ್ಥರಲ್ಲವೋ ಅವರು ಎಂದೂ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯವಿಲ್ಲ ಎಂದರು.


ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ವಿದ್ವಾಂಸರಾದ ಶ್ರಿ ಸಿ.ಪಿ.ಕೆ ಅವರು ಮಾತನಾಡುತ್ತಾ… ‘ಕನ್ನಡದ ಬೆಳಕು ಒಳಗೂ ಹೊರಗೂ ಸದಾ ಬೆಳಗುತಿರಬೇಕು. ಉತ್ಸವ ಎನ್ನುವ ಸಂಸ್ಕೃತ ಪದದ ಬದಲು ಇಲ್ಲಿ ಹಬ್ಬ ಎಂಬ ಕನ್ನಡದ ಪದ ಬಳಸಿದ್ದು ಆಪ್ತವಾಗಿದೆ. ಕನ್ನಡದ ಬಗ್ಗೆ ಶಿಕ್ಷಕರಿಗೆ ದೊಡ್ಡ ಜವಾಬ್ದಾರಿ, ಹೊಣೆಗಾರಿಕೆಯಿದೆ. ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು, ಚಾರಿತ್ರ್ಯವನ್ನು ಬೆಳೆಸಬೇಕು. ಕನ್ನಡ ಅನ್ನೋದು ಒಂದು ಭಾಶೆಯ ಹೆಸರಲ್ಲ; ಅದೊಂದು ಸಂಸ್ಕೃತಿ ಎಂದರು.

“ಹಿಂದಿ ರಾಷ್ಟ್ರ ಭಾಶೆ ಎಂಬ ತಪ್ಪು ಕಲ್ಪನೆ ಇದೆ. ಭಾರತದ ಎಲ್ಲಾ ಭಾಶೆಗಳೂ ರಾಷ್ಟ್ರ ಭಾಶೆಗಳೆ. ಆದರೆ ಹಿಂದಿಯನ್ನು ಹಿಂದಿನಿಂದ ಹೇರಿಕೆ ಮಾಡಲಾಗುತ್ತಿದೆ. ಅದು ಸರಿಯಲ್ಲ. ಪ್ರಾಥಮಿಕ ಹಂತದಲ್ಲಿ ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು” –ಸಿ.ಪಿ.ಕೆ.


ಶಿಕ್ಷಕರ ಕನ್ನಡ ಹಬ್ಬದ ಬೆಳಗಿನ ಅವಧಿಯಲ್ಲಿ ಇಬ್ಬರು ಮಹನೀಯರ ಮಾತುಗಳ ನಂತರ ತಾಲೂಕಿನಲ್ಲಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಾದ ವೈ. ಎಸ್. ಹರಗಿ (ಹುಲ್ಲಹಳ್ಳಿ ಪ್ರೌಢ ಶಾಲೆ) ಸಂತೋಷ ಗುಡ್ಡಿಯಂಗಡಿ ( ಹೆಗ್ಗಡಹಳ್ಳಿ ಪ್ರೌಢಶಾಲೆ), ವಿಜಯಕುಮಾರ್ (ಹುಲ್ಲಹಳ್ಳಿ ಪ್ರೌಢ ಶಾಲೆ) ಸತೀಶ್ ದಳವಾಯಿ(ಹಳ್ಳದಕೇರಿ ಶಾಲೆ) ಮಹದೇವ ನಾಯಕ (ಕಳಲೆ ಶಾಲೆ) ಇವರನ್ನು ಸನ್ಮಾನಿಸಲಾಯಿತು.



ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್

ಮದ್ಯಾಹ್ನದ ಅವಧಿಯಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್ ಅವರು ಕನ್ನಡ ಜಾನಪದ ಸಿರಿಯ ಕುರಿತು ಮಾತನಾಡಿದರು. ‘ಜಾನಪದ ಎಂದರೆ ಜನರ ಪದ. ಪದ ಎಂದರೆ ಪಾದ. ಪದ ಬಿಟ್ಟು ಪದ ಬಿಟ್ಟು ಮಾಡಿಕೊಂಡ ಹಾದಿಯೇ ಜನಪದ. ಸಮಗ್ರ ಜಾನಪದ ಎಂದರೆ ಒಂದು ಜನ ಸಮುದಾಯದ ಪರಿಪೂರ್ಣ ಬದುಕು. ಜನಪದ ಇನ್ನು ಯಾಕೆ ಜೀವಂತವಾಗಿದೆಯೆಂದರೆ ಅದರಲ್ಲಿರುವ ಸತ್ವದಿಂದ, ಅದರಲ್ಲಿ ಚಿತ್ರಿತವಾಗಿರುವ ಜೀವನ ಚಿತ್ರಣದಿಂದ’ ಎಂದು ಜನಪದದ ಹಿರಿಮೆಯನ್ನು ಸಾರುತ್ತಲೆ ಕತೆ, ಹಾಡು, ಒಗಟು, ಹಾಸ್ಯಗಳ ರಸಧಾರೆಯನ್ನು ಶಿಕ್ಷಕರಿಗೆ ಉಣಬಡಿಸಿದರು.

 ಹಬ್ಬ ಎಂದರೆ ಹಾಡು, ಕುಣಿತ ಸಂಭ್ರಮ ಇರಲೇಕಲ್ಲವೆ.

‘ಹಚ್ಚೇವು ಕನ್ನಡದ ದೀಪ’ ಎಂದು ಹೆಗ್ಗಡಹಳ್ಳಿಯ ಶಿಕ್ಷಕಿ ಸುನಂದ ಅವರ ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಶಾಲೆಯ ಶಿಕ್ಷಕಿಯರು  ನೃತ್ಯ ಮಾಡಿದರು. ‘ಚೆಲುವಯ್ಯ ಚೆಲುವೋ’ ಎಂದು ಕೋಲಾಟ ಮಾಡಿದ್ದು ಶಿಕ್ಷಕಿ ರಾಧಿಕಾ ಮತ್ತವರ ಹಿರಿಯ ಶಿಕ್ಷಕಿಯರನ್ನೊಳಗೊಂಡ ತಂಡ. ದೇಬೂರು ಶಾಲೆಯ ರವಿಕುಮಾರ್ ಮತ್ತು ತಂಡದವರು ಕಂಸಾಳೆ ಹಿಡಿದು ಕುಣಿದರು. ಸಿ.ಆರ್.ಪಿ. ಮಂಜುನಾಥ್ ಮತ್ತು ತಂಡದವರು ಸಿದ್ದಪ್ಪಾಜಿಯ ನೆನೆದು ತಂಬೂರಿ ಪದವ ಹಾಡಿದರು. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಹಬ್ಬದ ಸಮಿತಿಯ ಸದಸ್ಯರೊಂದಿಗೆ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಹಾಡನ್ನು ಹಾಡಿದರೆ ವಿವಿಧ ಶಿಕ್ಷಕರು ಕನ್ನಡಗೀತೆಗಳನ್ನು ಹಾಡಿದರು.


ಶಿಕ್ಷಕರ ಕವಿಗೋಷ್ಠಿ.

ಕನ್ನಡ ಹಬ್ಬದಲ್ಲಿ ತಾಲೂಕಿನ 24 ಶಿಕ್ಷಕ ಕವಿಗಳ ಕವಿಗೋಷ್ಠಿ ನಡೆಯಿತು. ಅಧ್ಯಕ್ಷತೆಯನ್ನು ಹುಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೈ.ಎಸ್.ಹರಗಿ ವಹಿಸಿದ್ದರು. ಹಳ್ಳದಕೇರಿ ಶಾಲೆಯ ಸತೀಶ್ ದಳವಾಯಿ ಕವಿಗೋಷ್ಠಿ ನಡೆಸಿಕೊಟ್ಟರು. ಕನ್ನಡ ನಾಡು ನುಡಿ ಕುರಿತಾಗಿಯೇ ಬಹುತೇಕ ಕವಿತೆಗಳಿದ್ದವು. ಮಡುವಿನಹಳ್ಳಿ ಪ್ರೌಢ ಶಾಲೆಯ ಪ್ರಕಾಶ್ ಅವರ ಗಡಿನಾಡ ಕನ್ನಡಿಗರ ನೋವಿಗೆ ಮಿಡಿದ ‘ನಾವು ನಿಮ್ಮವರಲ್ಲವೆ’ ಎಂಬ ಕವಿತೆ ವಿಶಿಷ್ಠವಾಗಿತ್ತು.

 ಶಿಕ್ಷಕರ ಪ್ರತಿಭೆಗಳನ್ನು ಗುರುತಿಸುವ, ಅವರ ಕನ್ನಡಾಭಿಮಾನವನ್ನು ಜಾಗೃತಗೊಳಿಸುವ “ಶಿಕ್ಷಕರ ಕನ್ನಡ ಹಬ್ಬವನ್ನು ಆಯೋಜಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ನಂಜನಗೂಡು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್.ರಾಜು ಮತ್ತು ಬಿ. ಆರ್. ಸಿ. ಶ್ರೀ ಕೆ. ಜಿ. ಮಹೇಶ್ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೂ ಶಿಕ್ಷಕರು  ಕೃತಜ್ಞತೆಯ ಹೂಮಳೆ ಸುರಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬದ ವಿವಿಧ ಕಾರ್ಯಕ್ರಮಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಕನ್ನಡ ಹಬ್ಬದ ಬೆಳಗಿನ ಅವಧಿಯ ಕಾರ್ಯಕ್ರಮದ ನಿರೂಪಣೆ ಮಾಡಿದವರು ದೇಬೂರಿನ ಆದರ್ಶ ಶಾಲೆಯ ಶ್ರೀ ಮಹೇಶ್ ಮತ್ತು ತಾಯೂರು ಸ|| ಹಿ|| ಪ್ರಾ|| ಶಾಲೆಯ ಶ್ರೀಮತಿ ರೇಖಾ ಅವರು. ಮದ್ಯಾಹ್ನದ ಅವಧಿಯ ಕಾರ್ಯಕ್ರಮ ನಿರೂಪಿಸಿದವರು ನವಿಲೂರಿನ ಸ|| ಪ್ರೌ|| ಶಾಲೆಯ ಶ್ರೀಕಂಠಮೂರ್ತಿ ಎಂ. ಮತ್ತು ಸ||ಹಿ||ಪ್ರಾ|| ಶಾಲೆ ಬೊಕ್ಕಹಳ್ಳಿಯ ಶ್ರೀಮತಿ ರೇಖಾ ಅವರು. 














ಕನ್ನಡ ಹಬ್ಬದ ರೂವಾರಿ ಶ್ರೀ ಸಿ. ಎನ್. ರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಂಜನಗೂಡು



Friday, 8 October 2021

ರಾಷ್ಟ್ರೀಯ ಪೋಷಣ್ ಅಭಿಯಾನ










ರಾಷ್ಟ್ರೀಯ ಪೋಷಣ್ ಅಭಿಯಾನ


ದಿನಾಂಕ 27-09-2021ರ ಸೋಮವಾರದಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೇಳೆ ಕಾಳುಗಳು, ಹಣ್ಣು ತರಕಾರಿಗಳ ಮಹತ್ವ ಅವುಗಳಿಂದ ದೊರಕುವ ಜೀವಸತ್ವಗಳನ್ನು ಮಕ್ಕಳಿಗೆ ತಿಳಿಸಲಾಯಿತು.

 ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಧಾನ್ಯಗಳು, ತರಕಾರಿಗಳಿಂದ ಕಲಾಕೃತಿಗಳನ್ನು ತಯಾರಿಸಿದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.












 

Wednesday, 18 November 2020

TALP ತರಬೇತಿ ಸಂಪನ್ನವಾಯಿತು.

 

TALP ತರಬೇತಿ


ನಾನು ನಾಟಕದ ಮೇಷ್ಟ್ರು. ನಮ್ಮ ಶಾಲೆಯ ಇತರೆ ವಿಷಯ ಶಿಕ್ಷಕರುಗಳೆಲ್ಲ ಟಾಲ್ಪ್ ತರಬೇತಿಗೆ ಹೋಗುತ್ತಿದ್ದಾಗ ‘ಏನಿದು ಕಂಪ್ಯೂಟರ್ ತರಬೇತಿ?’ ಎಂಬ ಕುತೂಹಲವಿತ್ತು.

ಆದರೆ ನನ್ನ ತರಗತಿಗಳಲ್ಲಿ, ಮಕ್ಕಳ ಬಿಡುವಿನ ವೇಳೆಗಳಲ್ಲಿ, ಶಾಲಾ ಕಾರ್ಯಕ್ರಮಗಳಲ್ಲಿ, ವಿಶೇಷ ಲೈವ್ ಕಾರ್ಯಕ್ರಮಗಳಲ್ಲೆಲ್ಲ ನಾನು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಬಂದವನು. ಮುಖ್ಯವಾಗಿ ನಮ್ಮ ಶಾಲೆ ವಿಜ್ಞಾನ ನಾಟಕಗಳಿಗಂತೂ ತಂತ್ರಜ್ಞಾನವನ್ನು ರಂಗವೇದಿಕೆಗೂ ತಂದವನು. ಕಳೆದ ವರ್ಷದ ನಮ್ಮ ನಾಟಕ “ಕಾರ್ಬನ್ ಲೋಕ” ಲ್ಯಾಪ್ ಟಾಪ್, ಪ್ರೊಜೆಕ್ಟರ್, ಇಂಟರ್ನೆಟ್ ನಾಟಕದ ಪ್ರಮುಖ ಪಾತ್ರವೂ ಹೌದು. ಇದಲ್ಲದೆ ಶಿಕ್ಷಣ ಸಚಿವರಿಂದ ಮೊದಲುಗೊಂಡು ದೇಶ ವಿದೇಶಗಳಲ್ಲಿರುವ ವಿಜ್ಞಾನಿಗಳು, ಸಾಹಿತಿಗಳ ಜೊತೆ ನಮ್ಮ ಮಕ್ಕಳು ನೇರವಾಗಿ ಸಂವಾದಿಸಲಿಕ್ಕೆ ಸಾಧ್ಯವಾಗಿದ್ದು ತಂತ್ರಜ್ಞಾನದಿಂದ. ಇನ್ನು ನಮ್ಮ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನ ರಾಜ್ಯದ ಪ್ರಜ್ಞಾವಂತರ ಗಮನ ಸೆಳೆಯುವುದಕ್ಕೂ ಕಾರಣವಾಗಿದ್ದು ತಂತ್ರಜ್ಞಾನ. ನಮ್ಮ ಪತ್ರಿಕೆ ಮತ್ತು ಬ್ಲಾಗ್ “ಅಳ್ಳೀಮರ”, “ಮಕ್ಕಳಂಗಡಿ” ಯೂಟ್ಯೂಬ್ ಚಾನಲ್ https://www.youtube.com/channel/UCrf0EGCeyR-nVoIJKA6YBqQ  ಫೇಸ್ಬುಕ್  https://www.facebook.com/makkalangadi ಪುಟಗಳನ್ನು ಹೊಂದಿರುವ ನಮ್ಮ ಶಾಲೆಯನ್ನು ಸ್ವತಃ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ https://en.wikipedia.org/wiki/S._Suresh_Kumar  ಅವರು ಹುಡುಕಿಕೊಂಡು ಬರುವಂತಾಗಿದ್ದಕ್ಕೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿದ್ದು ಕಾರಣ.

ಮೇಲಿನ ಪೀಠಿಕೆಯನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಟಾಲ್ಪ್ ತರಬೇತಿ ಎಂಬುದು ಶಿಕ್ಷಕರು  ಶೈಕ್ಷಣಿಕವಾಗಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡುತ್ತದೆ; ಈ ತರಬೇತಿಯಲ್ಲಿ ಕಲಿಸಲಾಗುವ ಕೆಲವಾರು ವಿಚಾರಗಳನ್ನು ನಾನು ಈಗಾಗಲೇ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಬಂದವನು. ನನಗೆ ತಿಳಿದಿರುವ ಮಾಹಿತಿಗಳಿಗೆ ಇನ್ನಷ್ಟು ಲಭ್ಯ, ಆವಶ್ಯಕ ಆಕರಗಳನ್ನು ಈ ತರಬೇತಿ ನನಗೆ ಒದಗಿಸುತ್ತಾ ಬಂತು. ಹೀಗಾಗಿ ತರಬೇತಿ ನನಗೆ ಸುಲಭ ಮತ್ತು ಪ್ರಯೋಜನಕಾರಿಯಾಯಿತು.

ಹತ್ತು ದಿನಗಳ ನಮ್ಮ ತರಬೇತಿ ನಂಜನಗೂಡಿನ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ನಮ್ಮ ಜೊತೆ ತರಬೇತಿಗೆ ಬಂದವರಲ್ಲಿ ಕೆಲವರು ಕಂಪ್ಯೂಟರ್ ಪರಿಣತರಿದ್ದರೆ, ಇನ್ನು ಕೆಲವರು ಹೊಸ ಲೋಕವೊಂದಕ್ಕೆ ಪ್ರವೇಶ ಪಡೆಯುತ್ತಿದ್ದವರಾಗಿದ್ದರು. ಎಲ್ಲರೂ ಸಮನ್ವಯದಿಂದ ತರಬೇತಿ ಸಂಪನ್ನವಾಯಿತು.

ನಮ್ಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಮತ್ತು ಶ್ರೀ ಜಿ.ಎಸ್.ವಿಶ್ವನಾಥ ಅವರು ತಮ್ಮ ಅನುಭವವನ್ನು ಧಾರೆ ಎರೆಯುವುದರ ಜೊತೆಗೆ ನಮ್ಮಲ್ಲಿರುವ ಅನುಭವಿಗಳ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸಿಕೊಟ್ಟು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದ್ದರು. ನಮ್ಮಲ್ಲಿ ಬೇಗ ಬೇಗ ಕಲಿತುಕೊಂಡವರು, ಉಳಿದವರಿಗೆ ಸಹಾಯ ಮಾಡುತ್ತಾ ಇನ್ನಷ್ಟು ಕಲಿಯುತ್ತಾ ಹತ್ತು ದಿನಗಳ ಈ ಮೌಲ್ಯಯುತ ತರಬೇತಿಯನ್ನು ಮುಗಿಸಿದೆವು ನಿಜ ಅರ್ಥದಲ್ಲಿ ನಾವು ಹೊಸದಾಗಿ ಕಲಿಕೆಯನ್ನು ಆರಂಭಿಸಿದೆವು. ಇನ್ನು ತರಬೇತಿಯಲ್ಲಿ ಪಡೆದ ಮಾಹಿತಿಗಳನ್ನು ಹೆಚ್ಚು ಹೆಚ್ಚು ನಮ್ಮ ಭೋದನಾ ಕ್ರಮಗಳಿಗೆ ಅಳವಡಿಸಿಕೊಳ್ಳುತ್ತಾ ವೈಜ್ಞಾನಿಕ ಜಗತ್ತು ನಮಗೆ ನೀಡಿದ ತಂತ್ರಜ್ಞಾನವನ್ನು ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸುತ್ತಾ ನಮ್ಮ ಶೈಕ್ಷಣಿಕ ಕ್ರಮವನ್ನು ಉತ್ತುಂಗಕ್ಕೇರಿಸುವ ಹೊಸ ಆಶಯಗಳೊಂದಿಗೆ ಶಾಲೆಗೆ ತೆರಳುತ್ತಿದ್ದೇವೆ.

 

ನಾವು ನಾಟಕ ಶಿಕ್ಷಕರಾಗಿ ಆಯ್ಕೆಯಾದಾಗ ನೀನಾಸಮ್  http://www.ninasam.org ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಕೆ.ವಿ.ಅಕ್ಷರ https://en.wikipedia.org/wiki/K._V._Akshara  ಅವರು ನಮಗೆಲ್ಲ “ನೀವು ಕೆಲಸ ಮಾಡುವ ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಗುರುತಿಸಿಕೊಳ್ಳಬೇಕೆಂದು” ಕಿವಿ ಮಾತು ಹೇಳಿದ್ದರು. ಆ ಸಂದರ್ಭದಲ್ಲಿ ಆಗಿನ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ https://en.wikipedia.org/wiki/Vishweshwar_Hegde_Kageri ಅವರು ಉಪಸ್ಥಿತರಿದ್ದಿದ್ದರು.

ಟಾಲ್ಪ್ ತರಬೇತಿಯ ಬಳಿಕ ಅಕ್ಷರ ಅವರ ಹೇಳಿಕೆಯನ್ನು “ನಮ್ಮ ಶಾಲೆಗಳು ತಂತ್ರಜ್ಞಾನಾಧಾರಿತ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದುಕೊಳ್ಳುತ್ತೇನೆ. ಇಂಥದ್ದೊಂದು ತರಬೇತಿಯನ್ನು ನಮಗೆ ನೀಡಿದ ಘನ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.

-ಸಂತೋಷ ಗುಡ್ಡಿಯಂಗಡಿ

 

ತರಬೇತಿಯ ಸಮಾರೋಪ

ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಾ.ಪ.ಪೂ.ಕಾಲೇಜಿನ ನೂತನ ಉಪಪ್ರಾಂಶುಪಾಲರಾದ ಶ್ರೀಮತಿ ಬಾಲಸರಸ್ವತಿಯವರು ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಸಿದ್ಧರಾಜು, ದೈ.ಶಿ.ಪರಿವೀಕ್ಷಕರಾದ ಶ್ರೀ ಸ್ವಾಮಿ ಪ್ರಕಾಶ್ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಸ್.ವಿಶ್ವನಾಥ ಮತ್ತು ಶ್ರೀನಿವಾಸ ಶೆಟ್ಟಿಗಾರ್ ಅವರು ತಂತ್ರಜ್ಞಾನಾಧಾರಿತ ಕಲಿಕೆಯ ಮಹತ್ವಗಳನ್ನು ಹಂಚಿಕೊಂಡರು. ಶ್ರೀಮತಿ ಶೋಭಾ (ಸಂಸ್ಕೃತ ಶಿಕ್ಷಕಿ, ಬಾ.ಸ.ಪ.ಪೂ.ಕಾ. ನಂಜನಗೂಡು), ಸಂತೋಷ ಗುಡ್ಡಿಯಂಗಡಿ (ನಾಟಕದ ಮೇಷ್ಟ್ರು ಸ.ಪ್ರೌ.ಶಾ. ಹೆಗ್ಗಡಹಳ್ಳಿ) ತರಬೇತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಸ್ವಾಗತ ಕೋರಿದವರು ಶ್ರೀಮತಿ ಟಿ. ಎಸ್. ಪದ್ಮಿನಿ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಪ್ರಾರ್ಥನೆ ಮಾಡಿದವರು ಶ್ರೀ ಅಂದಾನಪ್ಪ (ಸಂಗೀತ ಶಿಕ್ಷಕರು ಬಾ.ಸ.ಪ.ಪೂ.ಕಾ. ನಂಜನಗೂಡು). ನಿರೂಪಣೆ ಶ್ರೀ ದೀಪು (ದೈ.ಶಿ.ಶಿ. ಸ.ಪ್ರೌ.ಶಾಲೆ ಕುಪ್ಪರವಳ್ಳಿ) ವಂದನಾರ್ಪಣೆ ಮಾಡಿದವರು ಶ್ರೀಮತಿ ಪೂರ್ಣಿಮ ಪ್ರಸಾದ್ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಕಾರ್ಯಕ್ರಮದಲ್ಲಿ ಶ್ರೀ ಬಾಲಚಂದ್ರ ಭಟ್ (ಸ.ಶಿ., ಸ.ಪ್ರೌ.ಶಾಲೆ ಹೆಡತಲೆ) ಹಾಜರಿದ್ದರು.


ತರಬೇತಿಯ ಚಿತ್ರ ಸಂಪುಟ










Friday, 28 February 2020

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2020 ವಿಜ್ಞಾನಿಯೊಡನೆ ನೇರ ಸಂವಾದ LIVE INTERACTION...




ವಿಜ್ಞಾನಿಯೊಬ್ಬರ ಮನದಾಳದ ಮಾತು
ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ (28-02-2020) ವಿಜ್ಞಾನಿ ಡಾ. ದಿನೇಶ್ ಶೆಟ್ಟಿಯವರೊಡನೆ ನೇರ ವಿಡಿಯೋ ಸಂವಾದ ನಡೆಯಿತು. ಅಬುಧಾಬಿಯಿಂದ ಅವರು ಮಕ್ಕಳೊಡನೆ ಮಾತನಾಡಿದರು. ಮೂಲತಃ ಉಡುಪಿ ಜಿಲ್ಲೆ ಕುಂದಾಪುರದವರಾದ ದಿನೇಶ್ ಕ್ಯಾನ್ಸರ್ ಕಾಯಿಲೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಜ್ಞಾನ ಮತ್ತು ನೆನಪು, ತಾನ್ಯಾಕೆ ಕ್ಯಾನ್ಸರ್ ಅನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡೆ, ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.



ಕ್ಯಾನ್ಸರ್ ಕುರಿತೇ ಸಂಶೊಧನೆ ಮಾಡಬೇಕು ಅಂತ ಯಾಕನಿಸಿತು? ಎಂದು 9ನೇ ತರಗತಿಯ ಸಹನಾ ಕೇಳಿದಾಗ ದಿನೇಶ್ ಅವರು ತನ್ನ ಬಾಲ್ಯದ ಘಟನೆಯೊಂದನ್ನು ವಿವರಿಸಿದರು. ಈ ಘಟನೆ ಮಕ್ಕಳಿಗೆ ಸ್ಪೂರ್ತಿ ಚೈತನ್ಯ ತುಂಬುವಂಥದ್ದಾಗಿತ್ತು. ಅವರು 9ನೇ ತರಗತಿಯಲ್ಲಿದ್ದಾಗ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆಯೊಂದಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಔಷಧಿಗೆ ಹೋಗಬೇಕಾಗಿತ್ತಂತೆ. ಆಗ ವೈದ್ಯರು ಸಿಗುತ್ತಿರುಲಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ತಮ್ಮದೇ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಾ ರೋಗಿಗಳಿಗೆ ಸಿಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿ ತಮ್ಮ ತಂದೆಗೆ ಇರಲಿಲ್ಲ. ವೈದ್ಯರು ಸಿಗದೆ ಬಸ್ಸು ನಿಲ್ದಾಣದಲ್ಲಿ ದಿನೇಶ್ ಅವರ ತಂದೆ ಕಣ್ಣೀರಿಟ್ಟರಂತೆ. ಅವರು ಅತ್ತಿದ್ದು ಕಾಯಿಲೆಯಿಂದಾಗಿಯಲ್ಲ ಈ ಸಮಾಜಿಕ ವ್ಯವಸ್ಥೆ ಬಡರೋಗಿಯನ್ನು ನಡೆಸಿಕೊಂಡ ಪರಿಗೆ. ಅಂದು ಡಾ. ದಿನೇಶ್ ತಮ್ಮ ತಂದೆಗೆ ಎರಡು ಮಾತು ಕೊಟ್ಟಿದ್ದರಂತೆ

1.     ಮುಂದೆ ತಾನು ಈ ಸಮಾಜದ ನಾಲ್ಕು ಜನರಿಗೆ ನೆರವಾಗುವಂತೆ ಬದುಕುತ್ತೇನೆ.
2.     ಕುಂದಾಪುರದಲ್ಲಿ ಉಚಿತವಾಗಿ ಔಷಧಿಯನ್ನು ನೀಡುವಂತ ಒಂದು ಆಸ್ಟತ್ರೆಯನ್ನು ಕಟ್ಟಿಸುತ್ತೇನೆ ಎಂದು.



ಮೊದಲನೆಯ ಮಾತಿನಂತೆ ದಿನೇಶ್ ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿದ್ದು 19 ದೇಶಗಳಲ್ಲಿ ಆ ಔಷಧಿ ರೋಗಿಗಳ ಮೇಲೆ ಪ್ರಯೋಗವಾಗುತ್ತಿದೆ. ಮತ್ತು ಮೆದುಳಿನ ಕ್ಯಾನ್ಸರ್ ಗೆ ಕಂಡುಹಿಡಿದರುವ ಔಷಧಿ ಇನ್ನೇನು ರೋಗಿಗಳ ಮೇಲೆ ಪ್ರಯೋಗಗೊಳ್ಳಲು ಸಿದ್ಧವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕವಾದರು ದಿನೇಶ್. ಎರಡನೇ ಮಾತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಆ ದಿನಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ತಾವು ಕ್ಯಾನ್ಸರ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದನ್ನು ವಿವರಿಸಿದರು.

ವಿಜ್ಞಾನಿಯಾಗ ಬೇಕಾದರೆ ಏನು ಓದಬೇಕು? ನಮ್ಮ ಮನಸ್ಥಿತಿಗಳು ಹೇಗಿರಬೇಕು? ಎಂದಮು 9ನೇ ತರಗತಿಯ ಜಿ. ಅನನ್ಯ ಕೇಳಿದ ಪ್ರಶ್ನೆಗೆ ದಿನೇಶ್ ಅವರು ಉತ್ತರ ನೀಡುತ್ತಾ, ವಿಜ್ಞಾನಿ ಎಂದರೆ ವಿಶೇಷವಾದ ಜ್ಞಾನವುಳ್ಳ ಎಲ್ಲರೂ ವಿಜ್ಞಾನಿಗಳೆ. ಆದರೆ ವಿಜ್ಞಾನದ ಪರಿಭಾಷೆಯಲ್ಲಿ ಅಂದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಜ್ಞಾನಿಯಾಗಬೇಕೆಂದರೆ ಮೊದಲು ಆಸಕ್ತಿ ಇರಬೇಕು, ಕುತೂಹಲ ಇರಬೇಕು, ತಾಳ್ಮೆ ಸಹನೆ ಇರಬೇಕು. ಸೋಲು ಗೆಲುವುಗಳನ್ನು ಸ್ವೀಕರಿಸುವ ಗುಣವಿರಬೇಕು, ಉತ್ಸಾಹವಿರಬೇಕು, ಸಮಾಜಕ್ಕಾಗಿ ಏನಾದರೂ ಒಳಿತನ್ನು ನೀಡಬೇಕೆಂಬ ಹಂಬಲವನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಪಡಬೇಕು. ಮುಖ್ಯವಾಗಿ ತನಗೆ ಆಸಕ್ತಿಯಿದೆಯೇ ಎಂದು ತನ್ನನ್ನು ತಾನು ಗುರುತಿಸಿಕೊಳ್ಳಬೇಕು.




ಒಂದರಿಂದ ಹತ್ತನೇ ತರಗತಿಯವರೆಗಿನ ಜ್ಞಾನ ಮೂಲಜ್ಞಾನ. ಈ ಮೂಲಜ್ಞಾನವನ್ನು ಮನಸ್ಸಿನಲ್ಲಿ ಉಳಿಯುವಂತೆ ಓದಬೇಕು. ಪರೀಕ್ಷೆಯಲ್ಲಿ ಗಳಿಸುವ ಅಂಕ ನಮ್ಮ ಜ್ಞಾನದ ಪ್ರತಿಫಲ ಅಲ್ಲ, ನಮ್ಮ ನೆನಪಿನ ಶಕ್ತಿಯ ಸಾಮರ್ಥ್ಯ. ವಿದ್ಯಾರ್ಥಿಗಳಲ್ಲಿ ಮೂರು ವಿಧ.
1)    ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇದ್ದರೆ ತನ್ನ ಪಾಲಿಗೆ ಜೀವನವೇ ಮುಗಿದು ಹೋಯ್ತು ಎಂದು ತಿಳಿದವರು.
2)    ಪರೀಕ್ಷೆಯನ್ನು ಗಂಭೀರವಾಗಿಯೇ ಸ್ವೀಕರಿಸಿ ತಮ್ಮ ಪ್ರಯತ್ನ ಮಾಡ್ತಾರೆ ತಾವು ನಿರೀಕ್ಷಿಸಿದಷ್ಟು ಅಂಕ ಬರದಿದ್ದಲ್ಲಿ ಅದನ್ನು ಧನಾತ್ಮಕವಾಗಿ ಸ್ವೀಕರಿಸುತ್ತಾರೆ.
3)    ಯಾವುದನ್ನೂ ಗಂಭೀರವಾಗಿ ಸ್ವೀಕರಿಸದೆ ತಮ್ಮ ಪಾಡಿಗೆ ತಾವಿರುವವರು.


ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರ್ಯಾರೂ ತುಂಬಾ ಚನ್ನಾಗಿ ಓದಿ ನೂರಕ್ಕೆ ನೂರು ಅಂಕಗಳಿಸಿದವರಲ್ಲ. ಹಾಗಾಗಿ ಯಾವಾಗಲೂ ಓದುವಾಗ ಜ್ಞಾನ ಸಂಪಾದನೆಗಾಗಿ ಓದಬೇಕು. ಜ್ಞಾನ ಸಂಪಾದನೆ ಮುಖ್ಯವಾದಾಗ ಓದುವ ಆಸಕ್ತಿ ಬೆಳೆಯುತ್ತದೆ, ಪ್ರೀತಿ ಹುಟ್ಟುತ್ತದೆ. ಓದನ್ನು ಎಂಜಾಯ್ ಮಾಡ್ತಿರ, ಹಾಗೆ ಕುಷಿಯಿಂದ ಓದಿದ್ದು ಜ್ಞಾನವಾಗಿ ಜೀರ್ಣವಾಗುತ್ತದೆ. ಆಗ ಪರೀಕ್ಷೆ ಬಹಳ ಸುಲಭವಾಗುತ್ತದೆ. ಜೀವನದಲ್ಲಿ ಯಾವುದೇ ಕೆಲಸ ಮಾಡಿ ಆದರೆ ಮುಖ್ಯವಾಗಿ ಪ್ರಯತ್ನ ಕಠಿಣ ಪರಿಶ್ರಮವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ.