Tuesday 30 December 2014

ಪ್ರವಾಸ 2014

2014-15ನೇ ಸಾಲಿನ ಶೈಕ್ಷಣಿಕ ಪ್ರವಾಸದ ಒಂದಷ್ಟು ಸಂತಸದ ಕ್ಷಣಗಳು















Friday 19 December 2014

ಸಂಚಿಕೆ -13

ನಮ್ಮ ನಾಡಿನಲ್ಲೊಬ್ಬ ಕಾಂಕ್ವಾಂಬಾ : ನಝೀಮ್

“ಇಡೀ ವಿಜ್ಞಾನ ಬೆಳೆದಿರುವುದು ಅನುಮಾನಗಳಿಂದ, ಸಂದೇಹಗಳಿಂದ, ಅಸ್ಪಷ್ಟ ನಿಲುವುಗಳಿಂದ” ಎಂಬ ಮಾತಿಗೆ ಉದಾಹರಣೆಯಂತೆ ಇದ್ದಾನೆ ಈ ನಝೀಮ್. ತ್ರೀ ಈಡಿಯಟ್ಸ್ ಎಂಬ ಸಿನಿಮಾದಲ್ಲಿ ವಿಮಾನದ ಮೇಲಿರುವ ಕ್ಯಾಮೆರಾವನ್ನು ಕಂಡು ಕುತೂಹಲದ ಬೆನ್ನುಬಿದ್ದ ನಝೀಮ್ ತಾನೊಂದು ಪ್ರಯೋಗಕ್ಕೆ ತೊಡಗಿಕೊಂಡ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ನಝೀಮ್ ತನ್ನ ಬಿಡುವಿನ ವೇಳೆಯಲ್ಲಿ ಗ್ಯಾರೇಜೊಂದರಲ್ಲಿ ಕೆಲಸಮಾಡುತ್ತಾನೆ. ಅಲ್ಲಿ ಸಿಗುವ ವೈರು, ಸರ್ಕ್ಯೂಟ್ ಬೋರ್ಡುಗಳು ಹೀಗೆ ತನ್ನ ಪ್ರಯೋಗಕ್ಕೆ ಏನೆಲ್ಲಾ ಅವಶ್ಯಕವೋ ಅವುಗಳನ್ನೆಲ್ಲಾ ಸಂಗ್ರಹಿಸುತ್ತಾ ಹೋಗುತ್ತಾನೆ. ಹಳೆಯದೊಂದು ಮೊಬಯ್ಲು ಫೋನನ್ನು ತಗೆದುಕೊಂಡ.
ತನ್ನ ಪ್ರಯೋಗಕ್ಕೆ ಅವಶ್ಯಕವಿರುವ ವಸ್ತುಗಳನ್ನೆಲ್ಲಾ ಹೊಂದಿಸಿಕೊಂಡ ಮೇಲೆ ತನ್ನ ಅಪೂರ್ವ ಆವಿಷ್ಕಾರದಲ್ಲಿ ತೊಡಗುತ್ತಾನೆ. ಅವನ ಕುತೂಹಲದ ಮೂರ್ತ ರೂಪವೇ “ಸಿಸಿಟಿವಿ”
ನಝೀಮನ ಸಿಸಿಟಿವಿ

ಆಫ್ರಿಕಾ ಖಂಡದ ಮಲಾವಿ ದೇಶದ ವಿಲಿಯಂ ಕಾಂಕ್ವಾಂಬಾ ಎಂಬ ಹುಡುಗ ಹೀಗೆ ಕುತೂಹಲಕ್ಕೆ ಬಿದ್ದು ಗುಜರಿ ಅಂಗಡಿಗಳಲ್ಲಿ ತಿಂಗಳಾನುಗಟ್ಟಲೆ ಅಲೆದಾಡಿ ತನ್ನ ಪ್ರಯೋಗಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಅದರಿಂದ ಅವನು ಗಾಳಿಯಂತ್ರವನ್ನು ಕಂಡುಹಿಡಿದು ತನ್ನ ಮನೆಯನ್ನು ಬೆಳಗಿಸುತ್ತಾನೆ. ಹುಚ್ಚುತನವೆಂದೇ ಕರೆಯಿಸಿಕೊಂಡಿದ್ದ ಕಾಂಕ್ವಾಂಬಾ ಗಾಳಿಯಂತ್ರದ ಆವಿಷ್ಕಾರ ಮುಂದೆ ಜಗದ್ವಿಖ್ಯಾತಗೊಂಡು ಅಮೆರಿಕ ದೇಶ ಆ ಮರಿವಿಜ್ಞಾನಿಯನ್ನು ಕರೆಯಿಸಿಕೊಂಡು ಗೌರವಿಸಿತು. (ಕಾಂಕ್ವಾಂಬಾನ ಯಶೋಗಾಥೆ “ಗಾಳಿ ಪಳಗಿಸಿದ ಬಾಲಕ” ಪುಸ್ತಕ ಕನ್ನಡದಲ್ಲೂ ಲಭ್ಯವಿದೆ. ಅನುವಾದ : ಕರುಣಾ ಬಿ. ಎಸ್. ಪ್ರಕಾಶಕರು: ಛಂದ ಪುಸ್ತಕ)
ಕಾಂಕ್ವಾಂಬಾನಂತೆ ಹುಚ್ಚು ಹಿಡಿಸಿಕೊಂಡ ನಮ್ಮ ನಝೀಮ್ “ಸಿಸಿಟಿವಿ”ಯನ್ನು ಕಂಡುಹಿಡಿದಿದ್ದಾನೆ. ಮಾರುಕಟ್ಟೆಯಲ್ಲಿ ಸಿಗುವ ಅತ್ಯಾಧುನಿಕ ಸಿಸಿಟಿವಿಗಿಂತ ಒಂದು ಕೈ ಮೇಲು ತನ್ನ ಸಿಸಿಟಿವಿ ಎನ್ನುತ್ತಾನೆ ನಝಿಮ್. ಹಳೆಯ ಮೊಬಯ್ಲ್ ಫೋನಿನ ಡಿಸ್ಪ್ಲೇ ಮತ್ತು ಕ್ಯಾಮೆರಾಗಳನ್ನು ಬಳಸಿ ಅದರಲ್ಲಿ ಸೆರೆ ಹಿಡಿದ ಚಿತ್ರ, ವಿಡಿಯೋಗಳನ್ನು ಸರ್ಕ್ಯೂಟ್ ಬೋರ್ಡೊಂದರ ಮೂಲಕ ಹಾದು ಇನ್ನೊಂದೆಡೆ ಅಳವಡಿಸಿರುವ ಮೆಮೊರಿ ಕಾರ್ಡಿನಲ್ಲಿ ಸಂಗ್ರಹಗೊಳ್ಳುತ್ತದೆ. ಗಂಟೆ, ನಿಮಿಷ, ಸೆಕೆಂಡುಗಳ ವಿವರಗಳೊಂದಿಗೆ ಸಂಗ್ರಹಗೊಳ್ಳುತ್ತದೆ. ಸಂಗ್ರಹಗೊಂಡ ದ್ರಶ್ಯಗಳನ್ನು ಕಂಪ್ಯೂಟರ್‍ಗೆ ಸಂಪರ್ಕಗೊಳಿಸಿದಾಗ ಎಲ್ಲಾ ವಿವರಗಳೊಂದಿಗೆ ಪರದೆಯಲ್ಲಿ ಕಾಣಿಸುತ್ತದೆ. ನಝೀಮ್ ಈ ಪ್ರಯೋಗವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸಿದ್ದಾನೆಂದರೆ ಇಡೀ ವ್ಯವಸ್ಥೆಯೊಳಗೆ ಏನಾದರು ದೋಷ ಕಂಡುಬಂದಲ್ಲಿ ಅದನ್ನು ಕಂಪ್ಯೂಟರ್ಗೆ ಸಂಪರ್ಕಗೊಳಿಸಿದಾಗ ಎಲ್ಲಾ ವಿವರಗಳೊಂದಿಗೆ ಪರದೆಯಲ್ಲಿ ಕಾಣಿಸುತ್ತದೆ. ನಝೀಮ್ ಈ ಪ್ರಯೋಗವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸಿದ್ದಾನೆಂದರೆ ಇಡೀ ವ್ಯವಸ್ಥೆಯೊಳಗೆ ಏನಾದರು ದೋಷ ಕಂಡುಬಂದಲ್ಲಿ ಅದನ್ನು ಕಂಪ್ಯೂಟರ್ಗೆ ಅಳವಡಿಸಿದರೆ ನ್ಯೂನ್ಯತೆ ಎಲ್ಲಿದೆ ಎಂದು ಕಂಪ್ಯೂಟರ್ ಗುರುತಿಸಿ ಹೇಳಬಲ್ಲುದು. ಅಷ್ಟು ತಾಂತ್ರಿಕ ನಿಪುಣತೆಯನ್ನು ಸಾಧಿಸಿದ್ದಾನೆ ನಝೀಮ್.

‘ಸಿಸಿಟಿವಿ’ ವಿಜ್ಞಾನಿ ಮಯ್ಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಸರ್ಕಾರಿ ಪ್ರೌಢ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿ ನಝೀಮ್

ಮಾರುಕಟ್ಟೆಯ ಸಿಸಿಟಿವಿಗಳು ಅತಿ ದುಬಾರಿಯವಾದರೆ ಅದೇ ಫಲಿತಾಂಶಗಳನ್ನು ನೀಡುವ ನಝೀಮನ “ಸಿಸಿಟಿವಿ” ಅತ್ಯಂತ ಕಡಿಮೆ ಖರ್ಚಿನ, ನಾವು ಬಳಸಿ ಎಸೆದಿರುವಂತಹ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನೇ ಬಳಸಿಕೊಂಡು ತಯಾರಿಸಿರುವಂತದ್ದು. ನಮ್ಮ ಸಮಾಜದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಶಾಲೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಬೇಕೆಂದು ಸರ್ಕಾರ ಹೇಳುತ್ತಿದೆ. ಅದಕ್ಕೆ ನನ್ನ “ಸಿಸಿಟಿವಿ” ನೆರವಾಗಬಹುದು ಎನ್ನುತ್ತಾನೆ ನಝೀಮ್.
ಸರ್ಕಾರಿ ಶಾಲೆಯಲ್ಲಿ ಓದುತ್ತಾ, ಬಡತನದ ಬೇಗೆ ನೀಗಿಸಿಕೊಳ್ಳುವ ಸಲುವಾಗಿ ಗ್ಯಾರೇಜಿನಲ್ಲಿ ದುಡಿಯುತ್ತಾ ಇಂಥದ್ದೊಂದು ಪ್ರಯೋಗದಲ್ಲಿ ಯಶಸ್ವಿಯಾದ ನಝೀಮನಂತ ಸಾವಿರಾರು ಪ್ರತಿಭೆಗಳು ಈ ನಾಡಿನೆಲ್ಲೆಡೆ ಇರಬಹುದು. ಅವರನ್ನು ಗುರುತಿಸುವ ಅವರ ಆಸಕ್ತಿಗಳಿಗೆ ನೀರೆರೆವ ಕೆಲಸ ಅವರ ಶಿಕ್ಷಕರು ಮಾಡಬೇಕು.
ವರದಿ : ಸಂತೋಷ ಗುಡ್ಡಿಯಂಗಡಿ
*********************************************************************************

ಮರಿವಿಜ್ಞಾನಿಗಳ ಸಮಾಗಮ

ಇತ್ತೀಚೆಗೆ ಮಯ್ಸೂರು ಡಯಟ್ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮರಿವಿಜ್ಞಾನಿಗಳ ಸಮಾವೇಶದಂತಿತ್ತು. ಶಿಕ್ಷಕರ ಸಹಕಾರದೊಂದಿಗೆ ತಾವು ಆವಿಷ್ಕರಿಸಿದ ಹೊಸ ಹೊಸ ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಫಿಲೋಮಿನಾ ಲೋಬೋ (ನಿರ್ದೇಶಕರು ಪ್ರೌಢ ಶಿಕ್ಷಣ, ಆಯುಕ್ತರ ಕಛೇರಿ, ಸಾ. ಶಿ. ಇಲಾಖೆ, ಬೆಂಗಳೂರು) “ನಾವು ಮಾದರಿಗಳನ್ನಷ್ಟೇ  ಮಾಡುತ್ತಿದ್ದೇವೆ ಆದರೆ ಅದನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಮಕ್ಕಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತೇವೆಯೋ ಅಥವಾ ಬದುಕಿಗೆ ಸಜ್ಜುಗೊಳಿಸುತ್ತೇವೆಯೋ? ಎಂಬುದನ್ನು ವಿಜ್ಞಾನ ಶಿಕ್ಷಕರು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಪ್ರಶ್ನೆ ಕೇಳಬೇಕು. ವಿಜ್ಞಾನವನ್ನು ಪರೀಕ್ಷೆಗಾಗಿ ಓದುವುದಲ್ಲ, ಬೋಧಿಸುವುದಲ್ಲ; ಅದೊಂದು ಜೀವನ ಶೈಲಿಯಾಗಬೇಕು. ನಾವು ಇಂದು ಏನನ್ನು ಓದಿತ್ತೇವೆಯೋ ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಎಷ್ಟೇ ಎತ್ತರಕ್ಕೇರಲಿ ಮಾನವೀಯತೆಯನ್ನು ಮರೆಯಬಾರದು” ಎಂದರು.
INDIGENOUS TECHNOLOGY FOR INCLUSIVE GROWTH ವಿಷಯದ ಮೇಲೆ ಮಾತನಾಡುತ್ತಾ ಮಾನಸ ಗಂಗೋತ್ರಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಕೆ. ಎಸ್. ಮಲ್ಲೇಶ ಅವರು “ಇಡೀ ವಿಜ್ಞಾನ ಬೆಳೆದಿರುವುದು ಅನುಮಾನಗಳಿಂದ, ಸಂದೇಹಗಳಿಂದ, ಅಸ್ಪಷ್ಟ ನಿಲುವುಗಳಿಂದ. ಶಿಕ್ಷಕರು ತಮ್ಮ ಅಜ್ಞಾನವನ್ನು ಮುಚ್ಚಿಕೊಳ್ಳುವ ಯತ್ನದಲ್ಲಿ ಮಕ್ಕಳ ಜ್ಞಾನದ ಬಾಗಿಲನ್ನು ಮುಚ್ಚಬಾರದು. ನಾವಿಂದು ವಿಜ್ಞಾನ ಮೇಸ್ಟ್ರಾಗಿರುತ್ತೇವೆಯೇ ಹೊರತು  ಒಳಗಡೆ ವಿಜ್ಞಾನವೇ ಇರುವುದಿಲ್ಲ; ಅಂಧಶ್ರದ್ಧೆಯ ಗೂಡಾಗಿರುತ್ತೇವೆ. ಮಗು ಇಂದು ತರಗತಿಯಲ್ಲಿ ಮಾತ್ರ ವಿದ್ಯಾರ್ಥಿಯಾಗಿರುತ್ತದೆಯೇ ಹೊರತು ಬದುಕಿನಲ್ಲಿ ವಿದ್ಯಾರ್ಥಿಯಾಗಿರುವುದಿಲ್ಲ. ಹಾಗೆ ನಾವು ಮಕ್ಕಳನ್ನು ಬೆಳೆಸುತ್ತಿಲ್ಲ. ಮಗು ಮಾಡಬಹುದಾದ ಎಲ್ಲಾ ಕೆಲಸಗಳನ್ನು ಆದಷ್ಟು ಕಡಿಮೆ ಮಾಡುವುದೇ ಇತ್ತೀಚಿನ ನಾಗರೀಕ ಲಕ್ಷಣವಾಗಿದೆ. ನಾವೆಲ್ಲ ಮೌಢ್ಯದಿಂದ ಹೊರಬೇಕು” ಎಂದು ವಿಜ್ಞಾನ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲರಾದ ಬಿ.ಕೆ. ಬಸವರಾಜು, ಸಾ.ಶಿ.ಇ. ಉಪನಿರ್ದೇಶಕರಾದ ಎಚ್. ಆರ್. ಬಸಪ್ಪ, ಡಯಟ್ ಉಪಪ್ರಾಂಶುಪಾಲರಾದ ನಾರಾಯಣ ಗೌಡ ಮುಂತಾದವರು ಹಾಜರಿದ್ದರು.


 ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಹುಣಸೂರು ತಾಲೂಕು ಕೊತ್ತೇಗಾಲ ಸರ್ಕಾರಿ ಪ್ರೌಢ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಗಳಾದ ಅಕ್ಷತ್, ನಿತಿನ್ ಮತ್ತು ಸ್ವಾಮಿ ಪ್ರದರ್ಶಿಸಿದ ಪ್ಲಾಸ್ಟಿಕ್‍ನಿಂದ ಡಾಂಬರು ತಯಾರಿಸುವ ಮಾದರಿ
*****************************************************************


ನಂಜನಗೂಡಿನ ಜೆ.ಎಸ್.ಎಸ್. ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರಾದ ಹರಿಣಿ ಎಸ್. ರಾವ್ ಮತ್ತು ಸೋನು ಎಂ. ಎಸ್. ಇವರು ಪ್ರದರ್ಶಿಸಿದ ‘ಹೈಡ್ರೊಲಿಕ್ ಬ್ರಿಡ್ಜ್’ ಮಾದರಿ
*********************************************************


ನಮ್ಮ ಊರಿನ ಹುಡುಗರು ಪೆದ್ದರು
ಆದರು ಅವರು ಕೆಲಸದಲ್ಲಿ ನಿಪುಣರು
ರೋಷ ಆವೇಷ ಬಿಟ್ಟವರು
ಚಡ್ಡಿ ಪಂಚೆ ತೊಟ್ಟವರು
ಲಂಗು ಲಗಾಮಲ್ಲಿ ಇರುವವರು
ಪ್ರಾಣಿಗಳನ್ನು ಸಾಕುವರು
ಅದರಿಂದ ಉಪಯೋಗ ಪಡೆಯುವರು
ರಾಗಿಮುದ್ದೆ ತಿನ್ನುವರು
ಉಪ್ಪೆಸ್ರು ಬಸ್ಸಾರ್ ಕುಡಿಯುವರು

-ವಸಂತ್ ಕುಮಾರ್ ಡಿ. ಪಿ.
9ನೇ ತರಗತಿ
****************************************************

ನಾನು ಒಂದು ಪೆನ್ನು ತೆಗೆದುಕೊಂಡಿದ್ದೆ. ಆ ಪೆನ್ನು ಕುಣಿದಾಡುತ್ತ, ನಲಿಯುತ್ತ ಸಂತೋಷ ಪಡುತ್ತಿತ್ತು.
ನಮ್ಮ ಅಮ್ಮ ಮಾಡಿದ ಅನ್ನ ಮಾತನಾಡುತ್ತಿತ್ತು. ಆ ಅನ್ನ ನನ್ನನ್ನು ಬದುಕಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಿತ್ತು.
-ಅಪ್ಪು ಎಚ್. ಜಿ.
8ನೇ ತರಗತಿ
****************************************************

ನನ್ನ ಶಾಲೆ ಬಣ್ಣದ ಶಾಲೆ
ಹಸಿರು ಹಸಿರಿನ ನನ್ನ ಶಾಲೆ
ಇಲ್ಲಿಗೆ ಓದಲು ಬರುತ್ತೇವೆ
ಮಕ್ಕಳು ಶಾಲೆ ದೇಗುಲ
ಇದ್ದಂಗೆ ಅಂತ ಹೇಳುತ್ತಾರೆ
ನಿಜ ಶಾಲೆ ದೇಗುಲ
ಇಲ್ಲಿ ಭೇದ ಭಾವ ಜಾತಿ ಎಂಬುದು ಇಲ್ಲ
ಗೆಳೆತನದ ಸುವಿಶಾಲ ತರತರದ ಹೂವು
ಎರಡು ದಿನಕ್ಕೊಮ್ಮೆ ಕೊಡುತ್ತಾರೆ ಹಾಲು
ಮಧ್ಯಾಹ್ನ ಬಿಸಿಯೂಟ ಕೊಡುತ್ತಾರೆ
ಶಾಲೆ ಶಾಲೆ ಬಣ್ಣದ ಶಾಲೆ
ಹೆಗ್ಗಡಹಳ್ಳಿಯ ಶಾಲೆ
ಬಣ್ಣದ ಶಾಲೆಗೆ ಎಲ್ಲರೂ ಹೋಗೋಣ
ವಿದ್ಯೆ ಬುದ್ಧಿ ಕಲಿಯೋಣ

- ಕಾವ್ಯ ಎನ್.
8ನೇ ತರಗತಿ
****************************************************

ಬಣ್ಣ ಬಣ್ಣದ ನಮ್ಮೂರ ಶಾಲೆ
ಎಲ್ಲಿ ಇಹುದು ಬಣ್ಣದ ಶಾಲೆ?
ಎಲ್ಲಿ ನೋಡಿದರೂ ಬಣ್ಣ ಬಣ್ಣದ ನಗು
ನೋಡು ನೋಡು ಬಣ್ಣದ ನಮ್ಮೂರ ಶಾಲೆ
ಮಕ್ಕಳ ಮಾತೇ ಬಣ್ಣದ ಮಾತು
ಬೆಳಿಗ್ಗೆ ಬಂದರೆ ಬೆಳ್ಳನೆ ಹಾಲು
ಬೆಲ್ಲು ಹೊಡೆದರೆ ಪಾಠ ನೀ ಓದು
ಮಧ್ಯಾಹ್ನ ಆದರೆ ಬಿಸಿ ಊಟ
ನೋಡು ನೋಡು ಹೆಗ್ಗಡಹಳ್ಳಿ
ಬಣ್ಣದ ಶಾಲೆ ಸಂಜೆ ಆದರೆ
ಮನೆಗೆ ಓಟ
ಮತ್ತೆ ನಾಳೆ ಬರುವುದು
ಬಣ್ಣ ಬಣ್ಣದ ನಗುವು
-ರಕ್ಷಿತ ಎಚ್. ಪಿ.
8ನೇ ತರಗತಿ
****************************************************

ನಮ್ಮ ಶಾಲೆ ಸುಂದರವಾಗಿದೆ. ನಮ್ಮ ಶಾಲೆಯಲ್ಲಿ ಬಣ್ಣ ಬಣ್ಣದ ಪಕ್ಷಿಗಳು. ನಮ್ಮ ಶಾಲೆಯಲ್ಲಿ ಗಿಡಮರಗಳು ಹಸಿರಾಗಿವೆ.
ನಮ್ಮ ಶಾಲೆಯಲ್ಲಿ ಚನ್ನಾಗಿ ಪಾಠ ಹೇಳಿಕೊಡುತ್ತಾರೆ. ನಮ್ಮ ಶಾಲೆ ಎಂದರೆ ನನಗೆ ತುಂಬಾ ಇಷ್ಟ. ನಾಟಕ, ಕೋಲಾಟ, ಕಥೆ ಇತ್ಯಾದಿಗಳನ್ನು ಹೇಳಿಕೊಡುತ್ತಾರೆ. ನಮ್ಮ ಶಾಲೆಯಲ್ಲಿ ಕುಳಿತುಕೊಳ್ಳುವುದಕ್ಕೆ ನೆರಳಿದೆ. ನಮ್ಮ ಶಾಲೆಯಲ್ಲಿ ದೊಡ್ಡ ದೊಡ್ಡ ಮರಗಳಿವೆ. ನಮ್ಮ ಶಾಲೆಯಲ್ಲಿ ಪಕ್ಷಿಗಳು ಕಿಚ ಕಿಚ ಎಂದು ಸದ್ದು ಮಾಡುತ್ತವೆ. ನಮ್ಮ ಪ್ರಕೃತಿ ಚನ್ನಾಗಿದೆ.
-ರಂಜಿತಾ ಎನ್.
8ನೇ ತರಗತಿ
****************************************************

ಬಣ್ಣದ ಶಾಲೆ
ನನ್ನ ಶಾಲೆ
ಬಣ್ಣದ ಶಾಲೆ
ನಮ್ಮೆಲ್ಲರ ಶಾಲೆ
-ಸುದೀಪ್ ಪಿ.
8ನೇ ತರಗತಿ
****************************************************

2014ರ ನೋಬೆಲ್ ಶಾಂತಿ ಪುರಸ್ಕಾರ

ನೋಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುತ್ತಿರುವ 
ಮಲಾಲ ಯೂಸಫ್‍ಝೈ ಮತ್ತು ಕೈಲಾಸ್ ಸತ್ಯಾರ್ಥಿ

ಕೈಲಾಸ್ ಸತ್ಯಾರ್ಥಿ  
ಪ್ರೀತಿಯ ಮಕ್ಕಳೆ, ಕೈಲಾಸ್ ಸತ್ಯಾರ್ಥಿ ಎಂಬ ಹೆಸರು ಎರಡು ತಿಂಗಳ ಹಿಂದೆ ಭಾರತದಲ್ಲಿ ಅಷ್ಟೇನೂ ಪರಿಚಿತವಲ್ಲದ ಹೆಸರು. 2014ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾದಾಗ ಹಳೆಯ ಸಿನಿಮಾಗಳಲ್ಲಿ ದೇವರು ದಿಢೀರನೇ ಪ್ರತ್ಯಕ್ಷವಾಗುವಂತೆ ನಮಗೆಲ್ಲ ಆ ಹೆಸರು ಕಣ್ಮಣಿಯಾಯಿತು ನೋಡಿ! 
ಕಳೆದ 34ವರ್ಷಗಳಿಂದ ಮಕ್ಕಳ ಹಕ್ಕುಗಳಿಗಾಗಿ ನಿಷ್ಠೆಯಿಂದ ಹೋರಾಡುತ್ತಿರುವ ಕೈಲಾಸ್ ಸತ್ಯಾರ್ಥಿಯವರು ಆರಂಭಿಸಿದ “ಬಚಪನ್ ಬಚಾವೋ ಆಂದೋಲನ”ದ ಮೂಲಕ 80ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರ ಮುಕ್ತಿ ಮತ್ತು ಪುನರ್ವಸತಿಗಾಗಿ ದುಡಿಯುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಿ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿದ್ದಾರೆ.
1954 ಜನವರಿ 11ರಂದು ಮಧ್ಯಪ್ರದೇಶದ ವಿದಿಶಾದಲ್ಲಿ ಜನಿಸಿರುವ ಕೈಲಾಸ್ ಸತ್ಯಾರ್ಥಿಯವರು ತನ್ನ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟವರು. ಇದೇ ಕಾರ್ಯಕ್ಕಾಗಿ ಅವರಿಗೆ 2014ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಈ ಪ್ರಶಸ್ತಿಯನ್ನು ಅವರು ಪಾಕಿಸ್ತಾನದ 17ವರ್ಷದ ಬಾಲಕಿ ಮಲಾಲ ಯೂಸಫ್‍ಝೈ ಅವರೊಂದಿಗೆ ಹಂಚಿಕೊಂಡಿದ್ದಾರೆ.
ನೋಬೆಲ್‍ನಂತಹ ಅತ್ಯುನ್ನತ ಗೌರವ ದೊರಕುವವರೆಗೂ ನಮ್ಮದೇ ನಾಡಿನ ಇಂಥದ್ದೊಂದು ಮಹಾನ್ ವ್ಯಕ್ತಿತ್ವ ನಮಗೆಲ್ಲ ಪರಿಚಯವೇ ಇಲ್ಲವೆನ್ನುವುದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನು?

ಮಲಾಲ ಯೂಸಫ್‍ಝೈ
ಎರಡು ವರ್ಷಗಳ ಕೆಳಗೆ ಅಂದರೆ 2012ರ ಅಕ್ಟೋಬರ್ 9ರಂದು ತಾಲಿಬಾನ್ ಉಗ್ರಗಾಮಿಗಳು ಮಲಾಲ ಶಾಲೆಯಿಂದ ಬಸ್ಸಿನಲ್ಲಿ ಬರುವಾಗ ಗುಂಡಿನ ದಾಳಿ ನಡೆಸಿದರು. ಮಲಾಲಳ ತಲೆ, ಕುತ್ತಿಗೆಗೆ ಗುಂಡು ತಗುಲಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದಳು. ಅವಳನ್ನು ಇಂಗ್ಲೆಂಡಿನ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಮಲಾಲ ನಿಧಾನಕ್ಕೆ ಗುಣಮುಖವಾದಳು.
ಮಲಾಲ ಹುಟ್ಟಿದ್ದು 1997ರ ಜುಲೈ 12ರಂದು. ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮಿಂಗೋರ ಗ್ರಾಮದಲ್ಲಿ. ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಪ್ರದೇಶ. ಮಲಾಲ ತನ್ನ 10-12ನೇ ವಯಸ್ಸಿನಲ್ಲಿ ತಾಲಿಬಾನ್ ಆಡಳಿತ ಮತ್ತು ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಗುಪ್ತ ಹೆಸರಿಟ್ಟುಕೊಂಡು ಪ್ರತಿಷ್ಠಿತ ಃಃಅ ಸುದ್ಧಿ ಸಂಸ್ಥೆಗೆ ಸತತವಾಗಿ ಲೇಖನಗಳನ್ನು ಬರೆಯತೊಡಗಿದಳು. ಇದೇ ಕಾರಣಕ್ಕಾಗಿ ತಾಲಿಬಾನ್ ಉಗ್ರರು ಅವಳ ಮೇಲೆ ಗುಂಡಿನ ಮಳೆಗರೆದರು.
ತಾನು ಸಂಪೂರ್ಣ ಗುಣಮುಖವಾದ ಮೇಲೆ ಇಂಗ್ಲೆಂಡಿನಲ್ಲಿಯೇ ನೆಲೆಸಿ ಮಹಿಳೆಯರ ಹಕ್ಕು, ಶಿಕ್ಷಣಕ್ಕಾಗಿ ದುಡಿಯುತ್ತಿರುವ ಮಲಾಲ ಇಂದು ಜಗತ್ತಿನಾದ್ಯಂತ ಕೋಟ್ಯಾಂತರ ಮಕ್ಕಳ ಕಣ್ಮಣಿಯಾಗಿದ್ದಾಳೆ. ಅತೀ ಕಿರಿಯ ವಯಸ್ಸಿಗೆ ಅಂದರೆ 17ನೇ ವಯಸ್ಸಿಗೇ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಾಳೆ. ಈ ಪ್ರಶಸ್ತಿಯನ್ನು ಮಕ್ಕಳಿಗಾಗಿಯೇ ಜೀವನವ ಮುಡಿಪಾಗಿಟ್ಟಿರುವ ಕೈಲಾಸ್ ಸತ್ಯಾರ್ಥಿಯವರೊಂದಿಗೆ ಹಂಚಿಕೊಂಡರು.
ಈ ಇಬ್ಬರು ಮಹನೀಯರಿಗೆ ನಾವೆಲ್ಲ ಅಭಿನಂದನೆ ಹೇಳಿ ಸುಮ್ಮನಾಗದೆ ಅವರ ಮಾರ್ಗವನ್ನು ನಮ್ಮ ಜೀವನದಲ್ಲಿ ಅನುಸರಿಸಲು ಯತ್ನಿಸೋಣ.
ಕೈಲಾಸ್ ಸತ್ಯಾರ್ಥಿ ಮತ್ತು ಮಲಾಲ
*********************************************************************************

ಬೆನ್ಬಲ


ನಮಸ್ತೆ...
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬಹಳ ದೊಡ್ಡ ಕೆಲಸ ನಿಮ್ಮದು. ‘ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ತೋರಿಸಲು ವೀರ ನಾರಿಯಂತೆ ಹೋರಾಡಲು ಸಾಧ್ಯವಿಲ್ಲ’ ಎಂಬ ಅನಿತಾ ಅವರ ಮಾತು ಅದೆಷ್ಟು ನಿಜವೆಂದು ಯೋಚಿಸಿ ಬಹಳ ಸಂಕಟವಾಯಿತು.
-ಬೊಳುವಾರು ಮಹಮದ್ ಕುಂಞಿ
ಹಿರಿಯ ಸಾಹಿತಿಗಳು ಬೆಂಗಳೂರು.

ಅಳ್ಳೀಮರ ನೋಡಿದೆ. ಸಂತಸಪಟ್ಟೆ. ಕವಿತೆಗಳು, ಪ್ರಶಸ್ತಿ ಪಡೆದ ಪುಟ್ಟಿಯ ಬಗ್ಗೆ ಓದಿದೆ. ಒಳಿತಾಗಲಿ
-ನಾ. ಡಿಸೋಜ
ಹಿರಿಯ ಸಾಹಿತಿಗಳು ಸಾಗರ.

ಪುಟ ಪುಟವೂ ಮಕ್ಕಳ ಮನಸಿನ ವಿಸ್ಮಯ, ಆಂತಕ, ಸಂಭ್ರಮ ಬಿಡಿಸಿಡುವ ಶ್ರದ್ಧೆಗೆ ಧನ್ಯವಾದಗಳು.
-ರೂಪ ಹಾಸನ
ಮಕ್ಕಳ ಶಿಕ್ಷಣ ಹೋರಾಟಗಾರರು, ಕವಯಿತ್ರಿ.

ಶರಧಿಯ ಸಾಧನೆ ಸ್ಫೂರ್ತಿದಾಯಕ
-ತ್ರಿವೇಣಿ ಕೆ.
ಉಪನ್ಯಾಸಕರು, ಡಯಟ್ ಮಯ್ಸೂರು.
*********************************************************************************
ನಾಳೆಗಳು ನಮ್ಮದು...
ಮಲಾಲ ಮತ್ತು ಕೈಲಾಸ್ ಸತ್ಯಾರ್ಥಿಯವರಿಗೆ ನೋಬೆಲ್ ಶಾಂತಿ ಪುರಸ್ಕಾರ ದೊರಕಿದೆ. ಇಬ್ಬರೂ ಮಕ್ಕಳಿಗಾಗಿ ಮಿಡಿಯುವವರು. ಮಕ್ಕಳ ಬದುಕು ಬಾಲ್ಯ ನಾನಾ ಕಾರಣಗಳಿಗಾಗಿ ಸಂಕೀರ್ಣ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಆಸರೆಯಂತೆ ಕಂಡಿದೆ. ಮಕ್ಕಳ ಮೇಲೆ ಅವ್ಯಾಹತ ದೌರ್ಜನ್ಯ, ಮಕ್ಕಳ ಕಳ್ಳತನ, ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಿರುವ ಕ್ರೂರ ಸಮಾಜದೊಳಗೆ ಕೈಲಾಸ್ ಸತ್ಯಾರ್ಥಿ, ಮಲಾಲರಂತಹ ಸಾವಿರಾರು ಜೀವಗಳು ಹುಟ್ಟಿಕೊಳ್ಳಲಿ, ನಾಳಿನ ಜಗದೊಳಗೆ ಮಕ್ಕಳು ನಿರಾತಂಕವಾಗಿ ಬದುಕುವಂತಾಗಲಿ ಎಂಬ ಆಶಯದೊಂದಿಗೆ...
-ಸಂಪಾದಕ
*********************************************************************************
ಈ ಸಂಚಿಕೆಯ ಪ್ರಕಟಣೆಗೆ ನೆರವು ನೀಡಿದವರು ಶ್ರೀ ಕೆ. ಎಂ. ಎಂ. ರಾಜು ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಜಯನಗರ ಬೆಂಗಳೂರು.
*********************************************************************************

Wednesday 19 November 2014


ನಮ್ಮ ಶಾಲೆಯ ಅನಿತ ಎಚ್. ಕೆ. ಬರೆದ ಅತ್ಯಾಚಾರ ವಿರುದ್ಧದ ಕಿರು ಬರಹ ನಾಡಿನ ಪ್ರಖ್ಯಾತ ಪತ್ರಿಕೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ (16-11-2014) ಯಲ್ಲಿ ಪ್ರಕಟಗೊಂಡಿರುವುದು.



ಅನಿತ ಎಚ್. ಕೆ.





ಅಳ್ಳೀಮರದ ಹನ್ನೆರಡನೇ ಸಂಚಿಕೆ

ನವೆಂಬರ್ - 2014






ಹೆಣ್ಣೇ ಹೋರಾಡಬೇಕು.


ನಮ್ಮ ದೇಶದಲ್ಲಿ ಇತ್ತೀಚಿಗೆ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ನಿಮ್ಮೆಲ್ಲರಿಗು ಗೊತ್ತೇ ಇದೆ. ಅದರಿಂದ ಹೆಣ್ಣಿಗೆ ಈ ದೇಶದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ನಮಗೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದವರಲ್ಲಿ ಹೆಂಗಸರು ಸಹ ಇದ್ದರು. ಅವರಲ್ಲಿ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರು ಹೋರಾಡಿ ಮಡಿದರು. ಆ ವೀರ ಮಹಿಳೆಯರು ಹೋರಾಡಿದ್ದು ದೇಶಕ್ಕಾದರೆ, ಈಗಿನ ನಮ್ಮ ದೇಶದ ಮಹಿಳೆಯರು ಹೋರಾಡುತ್ತಿರುವುದು ತಮ್ಮ ಮಾನ, ಪ್ರಾಣಕ್ಕಾಗಿ. ಎಲ್ಲರೂ ಹೆಣ್ಣಿಗೆ ಗೌರವ ನೀಡುತ್ತಾರೆ. ಆದರೆ ಅದೇ ಹೆಣ್ಣಿನ ಮಾನವನ್ನೂ ತೆಗೆಯುತ್ತಿದ್ದಾರೆ. ಇದನ್ನೆಲ್ಲಾ ಅನುಭವಿಸುತ್ತಿರುವ ಹೆಣ್ಣಿಗೆ ಸರ್ಕಾರ ಏನು ರಕ್ಷಣೆ ನೀಡುತ್ತಿದೆ? ಯಾವ ರೀತಿ ರಕ್ಷಣೆ ನೀಡುತ್ತಿದೆ? ಕೆಲವು ಆರೋಪಿಗಳು ಸಿಕ್ಕಿರಬಹುದು, ಶಿಕ್ಷೆಯೂ ಆಗಿರಬಹುದು. ಆದರೆ ಮತ್ತೆ ಮತ್ತೆ ಅಂಥಹ ಆರೋಪಿಗಳು ನಮ್ಮ ದೇಶದಲ್ಲಿ ಹುಟ್ಟುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ತೋರಿಸಲು ವೀರ ಮಹಿಳೆಯರ ಹಾಗೆ ಹೋರಾಡಲು ಸಾಧ್ಯವಿಲ್ಲ. ಆದರೆ ಅವರಿಗೆ ರಕ್ಷಣೆ ಹಾಗೂ ಧೈರ್ಯವನ್ನು ತುಂಬಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರತಿ ಹೆಣ್ಣು ಮಗುವನ್ನು ತಂದೆ-ತಾಯಿಯರು ಶಾಲೆ ಬಿಡಿಸುತ್ತಿವುದರಲ್ಲಿ ಈ ಕಾರಣವು ಒಂದಾಗಿದೆ.
ಹೆಣ್ಣನ್ನು ಸಹನೆ ಉಳ್ಳವಳು, ಶಾಂತ ಸ್ವಭಾವದವಳು, ಅವಳಿಗೆ ಏನು ಶಿಕ್ಷೆಕೊಟ್ಟರೂ ಅವಳು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುವ ಮೂರ್ಖರಿಗೆ ಹೆಣ್ಣು ಸಿಡಿದರೆ ಬೆಂಕಿ ಚೆಂಡಾಗಬಲ್ಲಳು ಎನ್ನುವುದು ತಿಳಿದಿಲ್ಲ. ಹೆಣ್ಣು ಸಹ ಗಂಡಿನ ದೌರ್ಜನ್ಯಕ್ಕೆ ಹೆದರದೆ ತನಗಾಗುತ್ತಿರುವ ದೌರ್ಜನ್ಯದ ಬಗ್ಗೆ ಚಿಂತಿಸಿ ಧೈರ್ಯಮಾಡಿ ತನಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇದರ ಬಗ್ಗೆ ಪೊಲೀಸರು ಸಹ ತಕ್ಷಣ ಕ್ರಮಕೈಗೊಳ್ಳಬೇಕು. ಹೆಣ್ಣು ಸಹ ತನಗಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕೆಂದು ಕೇಳಿಕೊಳ್ಳುತ್ತೇನೆ.

-ಅನಿತ ಎಚ್. ಕೆ.
10ನೇ ತರಗತಿ

*********************************************************************************

ಸುಳ್ಳು ವಾರ್ತೆಗಳು

ಹೀರೇಕಾಯಿ ಗ್ರಾಮದ ಸೋರೇಕಾಯಿರಾಯರ ಮಗಳಾದ ಪಡವಲಕಾಯಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಘಟನೆಯ ಹಿನ್ನೆಲೆ. ಒಂದು ವರ್ಷದ ಹಿಂದೆ ಪಡವಲಕಾಯಿಯನ್ನು ಬದನೆಕಾಯಿಗೆ ಕೊಟ್ಟು ಮದುವೆ ಮಾಡಿದರು. ಆ ಸಮಯದಲ್ಲಿ ಪಡವಲಕಾಯಿಯ ತಂದೆ ತಾಯಿಗಳು ಐದು ಕೆ. ಜಿ. ತೊಂಡೆಕಾಯಿಯನ್ನು ವರದಕ್ಷಿಣೆಯಾಗಿ ಕೊಡುವೆವು ಎಂದು ಒಪ್ಪಿಕೊಂಡು ಅದನ್ನು ಕೊಡದ ಕಾರಣ ಪಡವಲಕಾಯಿಯ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರು. ಇದನ್ನು ತಾಳಲಾಗದ ಪಡವಲಕಾಯಿಯಯ ಹತ್ತಿರದಲ್ಲಿದ್ದ ಅಂಗಡಿಗೆ ಹೋಗಿ ಕೊತ್ತಂಬರಿ ಸೊಪ್ಪನ್ನು ತಂದು ಅದರಿಂದ ನೇಣು ಹಾಕಿಕೊಂಡಿದ್ದಾಳೆ. ಈ ಘಟನೆ ತಿಳಿದ ಕುಂಬಳಕಾಯಿ ಗ್ರಾಮದ ಪೊಲೀಸರು ಸಬ್ ಇನ್ಸ್‍ಪೆಕ್ಟರಾದ ಮೆಣಸಿನಕಾಯಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಗ್ರಹ -ಸಹನ ಎಚ್. ಡಿ.
10ನೇ ತರಗತಿ.

*********************************************************************************
ಚಿತ್ರ : ಚೈತ್ರ ಎಚ್. ಎನ್. 8ನೇ ತರಗತಿ

ವಿಸ್ಮಯ.

ವಿಸ್ಮಯ ಎಲ್ಲಾ ವಿಸ್ಮಯ
ಈ ಜಗವೆ ನನಗೆ ವಿಸ್ಮಯ

ತಿರುಗುವ ಭೂಮಿ ವಿಸ್ಮಯ
ಉರಿಯುವ ಸೂರ್ಯ ವಿಸ್ಮಯ
ಹೊಳೆಯುವ ತಾರೆ ವಿಸ್ಮಯ
ಉಕ್ಕುವ ಸಾಗರ ವಿಸ್ಮಯ || ವಿಸ್ಮಯ||

ಹಗಲು ರಾತ್ರಿಯ ಕಣ್ಣುಮುಚ್ಚಾಲೆ ಆಟವು ನನಗೆ ವಿಸ್ಮಯ
ಹುಟ್ಟು-ಸಾವಿನ ನಡುವೆ ಇರುವ ಗುಟ್ಟು ನನಗೆ ವಿಸ್ಮಯ
ಮಡಿಲಲಿ ಮಗುವ ಭಾರವ ಹೊತ್ತ ತಾಯಿ ನನಗೆ ವಿಸ್ಮಯ
ಬಳುಕುವ ತೆಳ್ಳನೆ ಬಳ್ಳಿಗೆ ಒಂದು ದೊಡ್ಡಕಾಯಿ ವಿಸ್ಮಯ || ವಿಸ್ಮಯ||

ಅರಳಿದ ಹೂವಿನ ಪಕಳೆಗಳುದುರಿ 
ಕಾಯಾಗುವುದು ವಿಸ್ಮಯ
ಕಾಯಿಯೊಳಗಿನ ಬೀಜವೇ ಪುನಃ 
ಮರವಾಗೊಂದೊಂದು ವಿಸ್ಮಯ
ಮಂಗನಿಂದ ಮಾನವನಾದ ಎಂಬುದೆ
ನನಗೆ ವಿಸ್ಮಯ
ಅಜ್ಜನ ಹೋಲುವ ಮೊಮ್ಮಗುವೊಂದು 
ಹುಟ್ಟೋದಿಲ್ಲಿ ವಿಸ್ಮಯ ||ವಿಸ್ಮಯ||

ಕಾಗೆಯ ಹೋಲುವ ಕೋಗಿಲೆ ಸ್ವರದ 
ಇಂಪೇ ನನಗೆ ವಿಸ್ಮಯ
ಅರಳಿದ ಪುಟ್ಟ ಮಲ್ಲಿಗೆ ಹೂವಿನ 
ಕಂಪೇ ನನಗೆ ವಿಸ್ಮಯ
ಸುಂಯ್ಯನೆ ಬೀಸುವ ಗಾಳಿಯಲಿರುವ 
ತಂಪೇ ಒಂದು ವಿಸ್ಮಯ
ಹಸಿರು ಎಲೆಯ ಮದರಂಗಿಯಲಿ ಅಡಗಿಹ
ಕೆಂಪೇ ವಿಸ್ಮಯ ||ವಿಸ್ಮಯ||

ಹಾರುವ ವಿಮಾನ ವಿಸ್ಮಯ
ತೇಲುವ ದೋಣಿ ವಿಸ್ಮಯ
ಜಿಗಿಯುವ ರಾಕೆಟ್ ವಿಸ್ಮಯ
ಓಡುವ ಕಾರು ವಿಸ್ಮಯ
ವಿಸ್ಮಯ, ವಿಸ್ಮಯ. ವಿಸ್ಮಯ. ವಿಸ್ಮಯ
ಎಲ್ಲವನ್ನೂ ಕಂಡುಹಿಡಿದ ಪುಟ್ಟ ಮಿದುಳೆ ವಿಸ್ಮಯ
ವಿಸ್ಮಯ ಎಲ್ಲಾ ವಿಸ್ಮಯ
ಈ ಜಗದೊಳಗೆಲ್ಲಾ ವಿಸ್ಮಯ.

-ಗಾರ್ಗಿ ಸೃಷ್ಠೀಂದ್ರ
5ನೇ ತರಗತಿ
ಬಂದಗದ್ದೆ ಕೆಳದಿ ಅಂಚೆ, ಸಾಗರ ತಾ||
ಶಿವಮೊಗ್ಗ ಜಿ||

(ಈ ಜಗತ್ತನ್ನೇ ವಿಸ್ಮಯದಿಂದ ನೋಡುವ ಪುಟ್ಟ ಮಗು ಗಾರ್ಗಿಯೇ ವಿಸ್ಮಯ. ಕನ್ನಡ ನಾಡಿನ ದಿಗ್ಗಜರ ಸಾಲುಗಳನ್ನು ನೋಡಿ ಆ ಸಾಲಿನಲ್ಲಿ ತಾನೂ ಇರಬೇಕೆಂಬ ಬಯಕೆ ಹೊತ್ತ ಗಾರ್ಗಿ ತನ್ನ ಅಪರೂಪದ ಬರಹಗಳಿಂದ ದೊಡ್ಡವರನ್ನು ಬೆರಗುಗೊಳಿಸಿದ್ದಾಳೆ. ಈಗಾಗಲೇ ನಾಟಕ ರಚನೆಯಲ್ಲಿ ತೊಡಗಿರುವ ಗಾರ್ಗಿ, ಅದ್ಭುತ ವಾಕ್ಪಟು. ಅವಳು ಕತೆ ಹೇಳುವ ಪರಿಗೆ ಎಂಥವರೂ ಬೆರಗಾಗಬೇಕು. ಗಾರ್ಗಿಯ ವಿಸ್ಮಯ ಅಳ್ಳೀಮರದಲ್ಲಿ.)
*********************************************************************************

ಈ ಸಲ ವಿನಿಗೆ ಸೈಸ್ನಿನಲ್ಲಿ
ಎರಡು ಮಾರ್ಕು ಕಡಿಮೆ


ಯಾಕೋ ಏನೋ
ಹೀಗಾಯಿತು ಅದು
ಯಾರೊಡನೆಯು ಅವ
ಉಂ ಹುಂ ಉಂ ಹುಂ
ಮಾತನಾಡುತಲೆ ಇಲ್ಲಾ
ಸುಮ್ಮನೆ ಸುಮ್ಮನೆ
ದಿನವಿಡಿ ಸುಮ್ಮನೆ
ಸಂಜೆ ವಾಕಿಂಗಿಗು
ಒಬ್ಬನೆ ಒಬ್ಬನೆ
ಕೆರೆಯ ದಂಡೆಯಲಿ
ಕುಳಿತಿದ್ದನೆ ಅವ
ಒಂದೊಂದಾಗಿ
ಒಂದೊಂದಾಗಿ
ಕಲ್ಲು ಒಗೆಯುತಲಿ ಇದ್ದನವ
ವಾಪಸು ಬರುವಾ ದಾರಿಯಲಿ
ಮುಸ್ಸಂಜೆಯ ಮಸು ಮಸುಕಲ್ಲಿ
ಯಾರೋ ಭುಜವನು ತಟ್ಟಿದರು
ತಡೆದು ನಿಲ್ಲಿಸಿಯೆ ಬಿಟ್ಟರು ಅವರು
ಓಹೊಯ್ ಹಳೆಯ ಗೆಳೆಯನವ
ಚಡ್ಡೀ ದೋಸ್ತಿ ಇನ್ನೇನು ಕೇಳ್ತಿ
ಇಷ್ಟುದಿನ ಕಾಣದೆ ಇದ್ದವ
ಬಾನಲಿ ಚಂದಿರ ಇಳಿದಿದ್ದ
ಹೆಗಲಲಿ ಕೈ, ಕೊರಳಿಗೆ ಬಳ್ಳಿ
ನೆನಪುಗಳೂ ಒಂದೆರಡಲ್ಲ
ಒಂದರ ಹಿಂದೆ ಒಂದು ಒಂದು
ಉದ್ದನೆ ರೈಲೇ ಆಯ್ತಲ್ಲ
ಕಳೆದು ಹೋದ ಆ ಎರಡಂಕಗಳು
ಮನ ಮುದುರಿಸಿದಾ ಮಾಯದವು
ನಕ್ಕವು ಕಪ್ಪನೆ ಮುಗಿಲಲ್ಲಿ
ಅಲ್ಲಿ ಚಂದಿರನ ಬಿಳಿಯಲ್ಲಿ !

-ಡಾ. ಆನಂದ ವಿ. ಪಾಟೀಲ್


(ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಕ್ಕೆ ಈ ಬಾರಿ ಆನಂದ ಪಾಟೀಲರು ಭಾಜನರಾಗಿದ್ದಾರೆ. ನಮ್ಮ ಶಾಲೆಗೆ ಆಗಮಿಸಿ ನಿಜದ ಅಳ್ಳೀಮರದ ನೆಳಲಲ್ಲಿ ನಮ್ಮ ಮಕ್ಕಳಿಗೆ ಕಥೆ ಹೇಳಿ ಇಡೀ ದಿನವ ಕಳೆದು ನಮನ್ನೆಲ್ಲ ಕುಷಿಗೊಳಿಸಿದ  ಹಿರಿಯರಾದ ಆನಂದ ಪಾಟೀಲರಿಗೆ ರಾಷ್ಟ್ರಪ್ರಶಸ್ತಿ ಸಂದ ಈ ಗಳಿಗೆ ನಮಗೂ ಹೆಮ್ಮೆಯಾಗಿದೆ. ಈ ಹಿರಿಯ ವ್ಯಕ್ತಿತ್ವಕ್ಕೆ ನಾವು ಪುಟ್ಟಮಕ್ಕಳು ಶುಭಾಶಯಗಳನ್ನು ಹೇಳುತ್ತಿದ್ದೇವೆ.)
*********************************************************************************

ಸತತ ಎರಡನೇ ಬಾರಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹಳ್ಳಿಯ ಹುಡುಗಿ ಶರಧಿ ಶೆಟ್ಟಿ

    ಕಳೆದ ವರ್ಷ ದೆÀಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾದ 2012-13 ನೇ ಸಾಲಿನ INSPIRE (Innovation in   Science   Pursuit   for   Inspired   Research)
ಈ ವರ್ಷ ಶರಧಿ ಶೆಟ್ಟಿಯವರಿಗೆ ಇನ್ನೊಂದು ರಾಷ್ಟ್ರ ಪ್ರಶಸ್ತಿ ದೊರೆತಿದೆ. ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ದೇಶದ ಇಪ್ಪತ್ತು ಮಕ್ಕಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರಶಸ್ತಿ ನೀಡಿ ಗೌರವಿಸಿದರು.ಈ ಪ್ರಶಸ್ತಿ ಪಡೆದ ಕರ್ನಾಟಕದ ಐವರು ಮಕ್ಕಳಲ್ಲಿ ಉಡುಪಿ ಜಿಲ್ಲೆಯ ಶಿರಿಯಾರವೆಂಬ ಗ್ರಾಮದ ಹುಡುಗಿ ಶರಧಿ ಶೆಟ್ಟಿಯೂ ಒಬ್ಬರು. ಆರನೇ ತರಗತಿಯವರೆಗೆ ಉಡುಪಿ ಜಿಲ್ಲೆಯ ಕುಂದಾಪುರ ಶೈಕ್ಷಣಿಕ ವಲಯದಲ್ಲಿರುವ ಹಳ್ಳಾಡಿ-ಹರ್ಕಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ ಶರಧಿ ನಂತರ ಕಾರ್ಕಳ ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ಸೇರಿಕೊಂಡರು. ಈಗವರು ಅಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿ. ಶರಧಿಯ ತಂದೆ ಶಿರಿಯಾರದ ಕೃಷಿಕ ಶ್ರೀ ಭಾಸ್ಕರ್ ಶೆಟ್ಟಿ, ಮಗಳ ಅಭಿಯಾನದಲ್ಲಿ ಜೊತೆಯಾಗಿರುವವರು ತಾಯಿ ಶ್ರೀಮತಿ ಸರೋಜಿನಿ.
   ವಸತಿ ನಿಲಯದ ವಿದ್ಯಾರ್ಥಿಯಾದ ಶರಧಿಗೆ ಮಳೆಗಾಲದಲ್ಲಿ ತರಗತಿಯಲ್ಲಿರುವಾಗಲೂ ಹೊರಗೆ ಒಣಹಾಕಿದ ಬಟ್ಟೆಗಳ ಬಗ್ಗೆಯೇ ಯೋಚನೆ ಬರುತಿತ್ತು. ಆಗೆಲ್ಲ, ಮಳೆಯಾಗುತ್ತಲೇ ಒಳಹೋಗುವ ಬಿಸಿಲು ಬಂದಾಗ ಹೊರಬರುವ ಉಪಕರಣವಿದ್ದರೆ ಚೆನ್ನಾಗಿತ್ತು ಎಂದು ಅನಿಸುತಿತ್ತಂತೆ. ತನ್ನ ಯೋಚನೆಯನ್ನು ವಿಜ್ಞಾನ ಶಿಕ್ಷಕ ಸುಧೀರಕುಮಾರ ಅವರಲ್ಲಿ ಶರಧಿ ತಿಳಿಸಿದಾಗ, ಅವರು ಈ ಯೋಚನೆಯನ್ನು ಮಾಡೆಲ್ ಆಗಿ ತಯಾರಿಸಲು ಸಹಕರಿಸಿದರು. ಹೀಗೆ, ಮ¼ಗಾಲದಲ್ಲಿ ಒಗೆದು ಬಿಸಿಲಿಗೆ ಒಣಹಾಕಿದ ಬಟ್ಟೆಗಳು ಮಳೆ ಬರುವ ಚಿನ್ಹೆಗಳನ್ನು ಗುರುತಿಸಿ ಒಳಬರುವ ಮತ್ತು ಬಿಸಿಲು ಬಂದಾಗ ಹೊರಹೋಗುವ `ರೇನ್ ಸೆನ್ಸರ್’ ಮಾದರಿ ತಯಾರಾಯಿತು. ಕಳೆದ ವರ್ಷ ಇನಸ್ಪೈರ್ ಸ್ವರ್ಣ ಪ್ರಶಸ್ತಿ ಮತ್ತು ಈ ವರ್ಷ ಮಕ್ಕಳ ದಿನಾಚರಣೆಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಗಲಿಡೀ ದುಡಿಯುವ ಜನಕ್ಕೆ ಹೊಟ್ಟೆಯ ಚಿಂತೆ ಇದ್ದೇ ಇರುತ್ತದೆ; ಒಣಗಿಸಲು ಹಾಕಿದ ಬಟ್ಟೆಯ ಚಿಂತೆಯೂ ಸೇರಿಕೊಳ್ಳಬಾರದೆಂಬ ಶರಧಿಯ ಕಾಳಜಿ ಕೂಡಾ ಈ ಮಾಡೆಲ್ ತಯಾರಿಯ ಹಿಂದೆ ಕೆಲಸಮಾಡಿದೆ.
   ಪ್ರತಿಭೆಯ ಜ್ಯೋತಿ ಸದಾ ಬೆಳಗುವಂತೆ ಎಣ್ಣೆಯುಣ್ಣಿಸುತ್ತಿರುವ ಸುಧೀರಕುಮಾರರಂತಹ ಶಿಕ್ಷಕರು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ತಂದೆ-ತಾಯಂದಿರು ಮತ್ತು ಕುತೂಹಲ, ಅನ್ವೇಷಣೆ ,ಯೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ಛಲ, ಇವೆಲ್ಲವೂ ಒಂದುಗೂಡಿದರೆ  ಶರಧಿಯಂತಹ ಗ್ರಾಮೀಣ ಪರಿಸರದ ಹುಡುಗಿ ಸಹ ರಾಷ್ಟ್ರದ ಉನ್ನತ ಗೌರವವನ್ನು ಪಡೆಯಲು ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
  ರಾಜ್ಯದ ಹಿರಿಮೆಯನ್ನು ದೇಶದ ರಾಜದಾನಿಯವರೆಗೆ ಕೊಂಡೊಯ್ದ ಶರಧಿ ಶೆಟ್ಟಿಯವರಿಗೆ ಅಭಿನಂದನೆಗಳು!
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸುತ್ತಿರುವ ಶರಧಿ ಶೆಟ್ಟಿ

*********************************************************************************
ಚಿತ್ರ : ದೀಪಿಕಾ ಎಚ್. ಪಿ. 9ನೇ ತರಗತಿ


ನನ್ನ ಊರು ನನ್ನಯ ಕೇರಿ


ನನ್ನ ಊರು ನನ್ನಯ ಕೇರಿ
ತುಂಬಾ ಕೊಳಕೋ ಇಲ್ಲಿಯ ಮೋರಿ
ಇಲ್ಲಿಯ ಹುಡುಗರ ಸ್ಟೈಲೋ ಸ್ಟೈಲೋ
ನೀರಿಗೆ ಹೆಂಗಸರ ಗೋಳೋ ಗೋಳೋ

ಇಲ್ಲಿಯ ಮನೆಗಳು ಬಹಳ ನೀಟು
ಮನೆಗಳ ಪಕ್ಕ ತುಂಬಾ ಘಾಟು
ಕುಡುಕರೆ ಇಲ್ಲಿಯ ಶಿಸ್ತು ಸಿಪಾಯಿ
ಇಲ್ಲಿಯ ಬೆಳೆಯು ತೆಂಗಿನಕಾಯಿ

ಇಲ್ಲಿಯ ಜನರಿಗೆ ಸ್ವಲ್ಪ ಜಂಬ
ಒಳ್ಳೆ ಮನಸ್ಸು ತುಂಬಾ ತುಂಬಾ
ಮಕ್ಕಳ ಆಸೆ ಪೂರೈಸೊಲ್ಲ
ಅದಕ್ಕೆ ನಾವು ಕನಸು ಕಾಣೊಲ್ಲ

ಮಾರಿ ಇದ್ದಾಳೆ ಅನ್ನೋ ನಂಬಿಕೆ
ರಾತ್ರಿ ಊರಿಗೆ ಬರಬೇಡಿ ಎಚ್ಚರಿಕೆ
ಆದ್ರೂ ಬಂದ್ರೆ ನಿಮ್ಮಿಷ್ಟ
ಬಂದಾದ ಮೇಲೆ ಬಲು ಕಷ್ಟ

-ಲೋಕೇಶ್ ಎಚ್. ಎಂ.
9ನೇ ತರಗತಿ.

*********************************************************************************

 ಚಿತ್ರ : ವಸಂತ್ ಕುಮಾರ್ 9ನೇ ತರಗತಿ

ಟೀಚರ್ ಒಮ್ಮೆ

ಟೀಚರ್, ಒಮ್ಮೆ ನಕ್ಕು ಬಿಡಿ
ಎಲ್ಲಾ ದುಃಖ ಮರೆತು ಬಿಡಿ
ಮುಖ ನೋಡೋಕೇ ಆಗ್ತಿಲ್ಲ
ಅಳುವೇ ಬರ್ತಿದೆ ನಮಗೆಲ್ಲ!

ಯಾಕೇ ಟೀಚರ್, ಏನಾಯ್ತು
ನಮ್ಮಿಂದೇನು ತಪ್ಪಾಯ್ತು?
ಉತ್ತರ ಪತ್ರಿಕೆ ನೋಡಿದ್ರಾ
ಯಾರೂ ಚನ್ನಾಗ್ ಬರ್ದಿಲ್ವಾ?

ನಿಮ್ಮಿ ಬರ್ತಡೇ ಈವತ್ತೇ
ವಿಶ್ ಮಾಡೋಲ್ವಾ, ಹೇಳಿ ಮಿಸ್
ಪಮ್ಮಿ ಮಲ್ಲಿಗೆ ಕೈಯಲ್ಲೇ
ಬಾಡ್ತಿದೆ, ತಗೊಳ್ಳಿ, ಏಳಿ, ಪ್ಲೀಸ್!

ಹೇಳಿ ಟೀಚರ್, ಏನ್ ವಿಷ್ಯ
ಹೇಗಿದೆ ಪಾಪೂ ಆರೋಗ್ಯ?
ಸರ್ ಜೊತೆ ಜಗಳ ಏನಾದ್ರೂ....
ಮಾತೇ ಬಿಟ್ರಾ ನೀವಿಬ್ರೂ?

ಟೀಚರ್, ಟೀಚರ್, ಹೋಗ್ಲಿ ಬಿಡಿ
ನಾವಿದ್ದೀವಿ ನಿಮ್ಮ ಜೊತೆ
ನಾಟಕ ಮಾಡಿ ಹಾಡ್ ಹಾಡ್ತೀವಿ
ಹೇಳ್ತೀವ್ ಪುಣ್ಯ ಕೋಟಿ ಕತೆ!

-ರಾಧೇಶ್ ತೋಳ್ಪಾಡಿ
ಹಿರಿಯ ಮಕ್ಕಳ ಸಾಹಿತಿ, ಬಂಟ್ವಾಳ

*********************************************************************************

ನಾಳೆಗಳು ನಮ್ಮದು....

‘ಅಳ್ಳೀಮರ’ಕ್ಕೆ ಪ್ರತಿ ಸಂಚಿಕೆಯೂ ಮಕ್ಕಳ ಹಬ್ಬವೆ. ಆದರೂ ನವೆಂಬರ್‍ನಲ್ಲೊಂದು ಶುಭಾಶಯ ಹೇಳಬೇಕು. ಹೇಗೆ? ಹೇಗೆಂದರೆ, ಅದು ಸಂಚಿಕೆಯನ್ನು ಸಮೃದ್ಧಗೊಳಿಸಿ. ಗಾರ್ಗಿ, ಶರಧಿ, ಅನಿತ, ಸಹನ, ದೀಪಿಕಾ, ಲೋಕೇಶ, ವಸಂತ, ಚೈತ್ರರ ಜೊತೆಗೆ ನಾಡಿನ ಹಿರಿಯರು ಮಕ್ಕಳ ಸಾಹಿತ್ಯ ವಿಶಿಷ್ಟ ದನಿಗಳಾದ ಆನಂದ ಪಾಟೀಲರು, ರಾಧೇಶ್ ತೋಳ್ಪಾಡಿಯವರು ಈ ಸಂಚಿಕೆಯನ್ನು ವಿಶೇಷವಾಗಿಸಿದ್ದಾರೆ.
ಮಕ್ಕಳ ದಿನಕ್ಕೆಂದೇ ಪುಟ್ಟ ಮಗು ಗಾರ್ಗಿಯ ವಿಸ್ಮಯವನ್ನು ಹೊತ್ತುಕೊಂಡು ‘ಅಳ್ಳೀಮರ’ ಬಂದಿದೆ. ಇಂತಹ ವಿಸ್ಮಯಗಳನ್ನು ಹುಡುಕುತ್ತಲೇ ನಮ್ಮ ನಮ್ಮ ಹಾದಿಯ ಹುಡುಕಿಕೊಳ್ಳುವ ಎಳೆಯೇ ಈ ಸಂಚಿಕೆ...

-ಸಂಪಾದಕ




ಅಳ್ಳೀಮರದ ಹನ್ನೊಂದನೇ ಸಂಚಿಕೆ. 

ಅಕ್ಟೋಬರ್ - 2014







Friday 17 October 2014


16-10-2014ರ ಪ್ರಜಾವಾಣಿ ಕಾಮನಬಿಲ್ಲು ಪುರವಣಿಯಲ್ಲೊಂದು ನಮ್ಮ ಬಗ್ಗೆ ಬರಹ




Sunday 28 September 2014



ಮಕ್ಕಳ ದಸರಾ -2014

ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ.
ದಿನಾಂಕ 27-09-2014ರ ಶನಿವಾರ ಮಯ್ಸೂರಿನ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ 2014ರ ಉದ್ಘಾಟನಾ ಸಮಾರಂಭ ನಡೆಯಿತು. ನಾಲ್ಕು ದಿನಗಳ ಕಾಲ ನಡೆಯುವ ಈ ಮಕ್ಕಳ ದಸರೆಯಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಶಾಲೆಯ ಮೈನಾ ರಂಗ ಬಳಗದ ಸದಸ್ಯರಿಂದ ಈ ಬಾರಿಯ ಮಕ್ಕಳ ದಸರೆಯಲ್ಲಿ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಎರಡು ಕಿರುನಾಟಕಗಳ ಪ್ರದರ್ಶನ ನಡೆಯಿತು. ಶಿಕ್ಷಣ ಇಲಾಖೆಯವರೆ ನಮ್ಮ ಶಾಲೆಯನ್ನು ಆಯ್ದುಕೊಂಡು ವರ್ತಮಾನದ ಎರಡು ಪ್ರಮುಖ ವಿಷಯಗಳನ್ನು ನೀಡಿ ನಾಟಕ ಮಾಡಲು ತಿಳಿಸಿದ್ದರು. ಅದರಂತೆ ನಾವು ಮೈನಾ ರಂಗ ಬಳಗದ ಗೆಳೆಯರು "ಶಿಕ್ಷಣ ಹಕ್ಕು ಕಾಯಿದೆ" ಹಾಗೂ "ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ" ವಿಷಯಗಳಿಗೆ ಎರಡು ಕಿರುನಾಟಕದ ತಯಾರಿ ನಡೆಸಿದೆವು.

ಒಂದೆಡೆ ಮಧ್ಯವಾರ್ಷಿಕ ಪರೀಕ್ಷೆ, ಇನ್ನೊಂದೆಡೆ ವಿಜ್ಞಾನ ನಾಟಕ ಸ್ಪರ್ಧೆ, ಮತ್ತೊಂದೆಡೆ ಪ್ರತಿಭಾಕಾರಂಜಿಯ ತಯಾರಿ. ಇದರ ನಡುವೆಯೆ ದಸರಾ ರಜೆಯ ಆರಂಭ! ಇವೆಲ್ಲದರ ನಡುವೆ ನಮ್ಮ ಉತ್ಸಾಹ ಮಾತ್ರ ಚೂರೂ ಕುಂದಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಮೇಲಿರಿಸಿದ ಭರವಸೆ, ಮತ್ತು ಜಗನ್ಮೋಹನ ಅರಮನೆ, ಮತ್ತು ಮಕ್ಕಳ ದಸರಾದಲ್ಲಿ ನೆರೆಯುವ ಸಾವಿರಾರು ಮಕ್ಕಳೆದುರು ನಿಲ್ಲುವ ಕ್ಷಣಗಳನ್ನು ಕಲ್ಪಿಸಿಕೊಂಡು ಪುಳಕಗೊಳ್ಳುತ್ತಾ ದಸರಾ ರಜೆ, ಶನಿವಾರ ಭಾನುವಾರಗಳೆನ್ನದೆ ಬುತ್ತಿ ಕಟ್ಟಿಕೊಂಡು ಇಡೀ ದಿನವಿದ್ದು ತಾಲೀಮು ನಡೆಸಿದೆವು.

ಅಂತೂ ಆ ಅಪೂರ್ವ ಕ್ಷಣ ಬಂದೇ ಬಿಟ್ಟಿತು. 27-09-2014ರ ಮುಂಜಾನೆಯೆ ಶಾಲೆಗೆ ಬಂದು ನಾವು 35 ಜನ ರಂಗ ಬಳಗದ ಗೆಳೆಯರು  ಸಜ್ಜಾಗಿ ಹೆಗ್ಗಡಹಳ್ಳಿಯಿಂದ ಮಯ್ಸೂರ ಕಡೆ ಹೊರಟೆವು. ಅರಮನೆಯಲ್ಲಿ ಸಾವಿರಾರು ಮಕ್ಕಳು, ಹಿರಿಯರು, ಮಂತ್ರಿ ಮಹೋದಯರು ನೆರೆದಿದ್ದರು. 

ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಅವರು ಮಾತನಾಡುತ್ತಾ "ಈ ಭೂಮಿಯ ಮೇಲೆ ದೇವರು ಅಂತೇನಾದರೂ ಇದ್ದರೆ ಅದು ಮಕ್ಕಳು" ಎಂದರು. ಹೌದು, ಅವರು ವೇದಿಕೆಯ ಮೇಲೆ ಹಾಗೆ ಅದ್ಭುತವಾಗಿ ಮಾತನಾಡುತ್ತಿದ್ದರೆ, ಪ್ರೇಕ್ಷಾಂಗಣದಲ್ಲಿ ಸಾವಿರಾರು ದೇವರುಗಳು ಅವರವರದೇ ಗದ್ದಲದಲ್ಲಿ ಮುಳುಗಿ ಹೋಗಿದ್ದರು. ಅದಕ್ಕೇ ಏನೋ ಸಚಿವರ ಅಪರೂಪದ ಮಾತುಗಳು ಮಯ್ಸೂರಿನ ಮಾಧ್ಯಮ ಮಿತ್ರರಿಗೆ ಕೇಳಿಸದೇ ಹೋದದ್ದು. ಯುವ ದಸರಾದಲ್ಲಿ ಹುಚ್ಚೆದ್ದು ಕುಣಿಯುವ ಕಿರುಚುವುದೇ ಪ್ರಮುಖವಾಗಿ ಹೋಯಿತು.

ಅಂತೂ ಸಭಾ ಕಾರ್ಯಕ್ರಮ ಮುಗಿದು, ಮಕ್ಕಳ ವಿವಿಧ ವೇಷಭೂಷಣ ಸ್ಪರ್ಧೆ ನಡೆದು ವೇದಿಕೆ ಮೈನಾ ರಂಗ ಬಳಗಕ್ಕೆ ತೆರೆದುಕೊಂಡಿತು. "ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ" ಎಂಬ ಕಂಬಾರರ ಹಾಡಿನೊಂದಿಗೆ ನಮ್ಮ ಕಾರ್ಯಕ್ರಮ ಆರಂಬಿಸಿದೆವು. 
ಶಿಕ್ಷಣ ಹಕ್ಕು ಕಾಯಿದೆ ಕುರಿತಾದ ಕಿರುನಾಟಕ. ಸರ್ಕಾರಿ ಶಾಲೆ, ಶಾಲೆಗೆ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯದ ಕುರಿತು ನಂಜನಗೂಡಿನ ಸಾಮಾನ್ಯ ಹಳ್ಳಿಯ ಜನರು ನೋಡುವ ದೃಷ್ಠಿಕೋನದಲ್ಲಿ ಇಡೀ ನಾಟಕ ಕಟ್ಟಲ್ಪಟ್ಟಿತ್ತು. ಅಂತರಾಳದಲ್ಲಿ ಹೆಣ್ಣು ಮಗಳೊಬ್ಬಳ ಹೋರಾಟ, ಗೌಡನೆನ್ನಿಸಿಕೊಳ್ಳುವ ಗಂಡಸೊಬ್ಬನ ದೌರ್ಜನ್ಯದ ಮೇಲೆ ಬೆಳಕು ಚಲ್ಲುತ್ತಾ ಶಿಕ್ಷಣ ಹಕ್ಕು ಕಾಯಿದೆಯ ಕುರಿತು ನಮ್ಮ ನಾಟಕ ರೂಪುಗೊಂಡಿತ್ತು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಸ್ವರೂಪ, ಅವುಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಮಹಿಳೆ ಸಂಘಟಿತ ಗೊಳ್ಳುವ ಚಿತ್ರಣದ ನಾಟಕ. ಈ ದೇಶದಲ್ಲಿ ನಡೆಯುವ ಬಾಲ್ಯವಿವಾಹ, ದೌರ್ಜನ್ಯ, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳನ್ನು ಪ್ರಧಾನವಾಗಿರಿಸಿಕೊಂಡು ಹೆಣೆಯಲ್ಪಟ್ಟ ಈ ರೂಪಕವನ್ನು ನಮ್ಮ ರಂಗಬಳಗದ ಹೆಣ್ಣು ಮಕ್ಕಳೇ ಅಭಿನಯಿಸಿದ್ದರು. ದೌರ್ಜನ್ಯದ ಪ್ರತೀಕವಾಗಿ ನಾಲ್ವರು ಘೋರ ರೂಪಿ ಗಂಡಸಿದ್ದರಷ್ಟೆ.

ಸುಮಾರು 50 ನಿಮಿಷಗಳ ನಮ್ಮ ಪ್ರದರ್ಶನ ಯಶಸ್ವಿಯಾಗಿತ್ತು ಎನ್ನುವುದಕ್ಕೆ ಪ್ರೇಕ್ಷಕ ಸಮೂಹ ನಿಮಿಷಗಳ ಕಾಲದ ಕರತಾಡನವೇ ಸಾಕ್ಷಿಯಾಗಿತ್ತು. ಗೌಡನ ಪಾತ್ರಧಾರಿ ಲೋಕೇಶ ಎಚ್. ಎಂ. ಪರಿಚಯ ಮಾಡುತ್ತಿದ್ದಂತೆ ಇಡೀ ಸಭಾಂಗಣ ಮುಗಿಲುಮುಟ್ಟುವಂತೆ ಕೂಗಿತು.ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರೂಪಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಡಾ. ಡಿ. ವಿ. ಕಾಂತ ಅವರಿಗೆ ಪ್ರೇಕ್ಷಕರು ಮಾಡಿದ ಕರತಾಡನವೇ ಸಾಕಾಗುತ್ತಿರಿಲಿಲ್ಲ; ನಾಲ್ಕಾರು ಬಾರಿ ಈ ಮಕ್ಕಳನ್ನು ನಿಮ್ಮ ಜೋರಾದ ಚಪ್ಪಾಳೆಯೊಂದಿಗೆ ಅಭಿನಂದಿಸಿ ಎಂದು ಕೂಗಿ ಕೂಗಿ ಹೇಳುತ್ತಿದ್ದರು.
ಹಲವಾರು ಸರ್ಕಾರಿ ಶಾಲೆಯ ಶಿಕ್ಷಕರು ನೇಪಥ್ಯಕ್ಕೆ ಧಾವಿಸಿ ಅಭಿನಂದಿಸಿದರು. ಮಾತುಗಳೆ ಬಾರದ ಮಕ್ಕಳ ಕೈಕುಲುಕಿ ಅಭಿನಂದಿಸುವ ಪರಿಯೆ ಹೇಳುತ್ತಿತ್ತು ಅವರ ಸಂಭ್ರವನ್ನು.

ಸಾಕಲ್ಲವೆ ನಮ್ಮ ಮಕ್ಕಳ ಶ್ರಮ ಸಾರ್ಥಕಗೊಳ್ಳಲು ಇಂಥದ್ದೊಂದು ಅಭೂತಪೂರ್ವ ಕ್ಷಣ?
ಹೌದು, ನಾಟಕ ಮುಗಿದ ಗಳಿಗೆಯೆ ನಮ್ಮ ಆತಂಕಗಳೆಲ್ಲ ಮಾಯವಾಗಿ ಹೊನಲಾಗಿತ್ತು ಸಂಭ್ರಮ. ಇಂಥದ್ದೊಂದು ಸಂಭ್ರಮವನ್ನು ನಮಗೊದಗಿಸಿಕೊಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆಯ ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಶಿಕ್ಷಣಾಧಿಕಾರಿಗಳಾದ ಡಾ. ಡಿ. ವಿ. ಕಾಂತ, ಶ್ರೀಮತಿ ಮಂಜುಳಾ ಡಯಟ್ ಮೈಸೂರು, ಶ್ರೀ ಚಂದ್ರ ಪಾಟೀಲ್, ಶ್ರೀ ಎಸ್. ಪಿ. ನಾಗರಾಜು ಅವರು, ಮಕ್ಕಳ ದಸರಾ ಉಪಸಮಿತಿಯವರಿಗೆ ನಮ್ಮ ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಪರವಾಗಿ ಧನ್ಯವಾದಗಳು.

ಮತ್ತು ಈ ಎಲ್ಲಾ ಸಂಭ್ರಮವನ್ನು ಸಾಧ್ಯವಾಗಿಸಿದ ರಂಗಭೂಮಿಗೆ. ಮಕ್ಕಳು ತಾಲೀಮಿನಲ್ಲಿ ಬಹುತೇಕ ಚನ್ನಾಗಿ ಮಾಡುವುದೇ ಇಲ್ಲ; ಆದರೆ ಪ್ರದರ್ಶನ ನೀಡಲು ಪ್ರೇಕ್ಷಕನ ಮುಂದೆ ನಿಂತಾಗ ಅವರು ಆವೇಶಗೊಂಡಂತೆ ಅಥವಾ ಮೈದುಂಬಿಕೊಂಡು ಪ್ರೇಕ್ಷಕ ಮತ್ತು ನಿರ್ದೇಶಕನನ್ನು ಚಕಿತಗೊಳಿಸಿಬಿಡುತ್ತಾರೆ. ಅದು ಸಾಧ್ಯವಾಗುವುದು ರಂಗಭೂಮಿಯಲ್ಲಿ, ನಾಟಕದಲ್ಲಿ.


ಇದೇ ಸಂಭ್ರಮದಲ್ಲಿ ಅಂಬಾವಿಲಾಸ ಅರಮನೆಯನ್ನು ನೋಡಿಕೊಂಡು, ನಂತರ "ನಟನ" ತಂಡದ 'ಧಾಂ ಧೂಂ ಸುಂಟರಗಾಳಿ' (ನಿರ್ದೇಶನ : ಜೀವನ್ ರಾಂ ಸುಳ್ಯ) ಹಾಗೂ 'ಕಂಸಾಯಣ (ನಿರ್ದೇಶನ : ಸಂತೋಷ ಗುಡ್ಡಿಯಂಗಡಿ) ನಾಟಕವನ್ನು ನೋಡಿಕೊಂಡು ಹೆಗ್ಗಡಹಳ್ಳಿಯನ್ನು ತಲುಪಿದೆವು.


ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ ಎಂದು ಕಾರ್ಯಕ್ರಮ ಆರಂಭಿಸುತ್ತಾ.......






ಶಿಕ್ಷಣ ಹಕ್ಕು ಕಾಯಿದೆಯ ನಾಟಕ ಆರಂಭ ಗೊಂಡು.... ಕುಡುಕ ಬಸ್ಯ, ಗೌಡ, ಗೌಡನ ಛತ್ರಿ























ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋದಿಸುತ್ತಾ....



ಡಾ. ವಿನಯಾ ಅವರ ಅದ್ಭುತಹಾಡು "ಹಾದಿಯುದ್ದಕ್ಕೂ ಗಿಡ ನೆಡುತ್ತಾ...." ಹಾಡಿಕೊಂಡು ದೂರ್ತರನ್ನು ತುಳಿದು ಒಂದಾಗಿ ಹೆಜ್ಜೆ ಹಾಕುತ್ತಾ......


ನಾವಿಷ್ಟು ಜನ ಮೈನಾ ರಂಗ ಬಳಗದ ಗೆಳೆಯರು


ಸಭೆಗೆ ನಮ್ಮ ಪರಿಚಯ ಮಾಡಿಕೊಡುತ್ತಾ.....




ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಡಾ. ಡಿ.ವಿ. ಕಾಂತ, ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಕಾಂತ್, ಶ್ರೀ ಬೆಟ್ಟನಾಯಕ ಅವರೊಂದಿಗೆ ನಮ್ಮ ಗೆಳೆಯರ ಬಳಗ.....








ಮಯ್ಸೂರಿನ ಹೆಮ್ಮೆ "ಅಂಬಾ ವಿಲಾಸ ಅರಮನೆ" ಮುಂದೆ ಕೆಲವು ಕ್ಷಣಗಳು....