Friday 28 February 2020

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2020 ವಿಜ್ಞಾನಿಯೊಡನೆ ನೇರ ಸಂವಾದ LIVE INTERACTION...




ವಿಜ್ಞಾನಿಯೊಬ್ಬರ ಮನದಾಳದ ಮಾತು
ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ (28-02-2020) ವಿಜ್ಞಾನಿ ಡಾ. ದಿನೇಶ್ ಶೆಟ್ಟಿಯವರೊಡನೆ ನೇರ ವಿಡಿಯೋ ಸಂವಾದ ನಡೆಯಿತು. ಅಬುಧಾಬಿಯಿಂದ ಅವರು ಮಕ್ಕಳೊಡನೆ ಮಾತನಾಡಿದರು. ಮೂಲತಃ ಉಡುಪಿ ಜಿಲ್ಲೆ ಕುಂದಾಪುರದವರಾದ ದಿನೇಶ್ ಕ್ಯಾನ್ಸರ್ ಕಾಯಿಲೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಜ್ಞಾನ ಮತ್ತು ನೆನಪು, ತಾನ್ಯಾಕೆ ಕ್ಯಾನ್ಸರ್ ಅನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡೆ, ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.



ಕ್ಯಾನ್ಸರ್ ಕುರಿತೇ ಸಂಶೊಧನೆ ಮಾಡಬೇಕು ಅಂತ ಯಾಕನಿಸಿತು? ಎಂದು 9ನೇ ತರಗತಿಯ ಸಹನಾ ಕೇಳಿದಾಗ ದಿನೇಶ್ ಅವರು ತನ್ನ ಬಾಲ್ಯದ ಘಟನೆಯೊಂದನ್ನು ವಿವರಿಸಿದರು. ಈ ಘಟನೆ ಮಕ್ಕಳಿಗೆ ಸ್ಪೂರ್ತಿ ಚೈತನ್ಯ ತುಂಬುವಂಥದ್ದಾಗಿತ್ತು. ಅವರು 9ನೇ ತರಗತಿಯಲ್ಲಿದ್ದಾಗ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆಯೊಂದಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಔಷಧಿಗೆ ಹೋಗಬೇಕಾಗಿತ್ತಂತೆ. ಆಗ ವೈದ್ಯರು ಸಿಗುತ್ತಿರುಲಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ತಮ್ಮದೇ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಾ ರೋಗಿಗಳಿಗೆ ಸಿಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿ ತಮ್ಮ ತಂದೆಗೆ ಇರಲಿಲ್ಲ. ವೈದ್ಯರು ಸಿಗದೆ ಬಸ್ಸು ನಿಲ್ದಾಣದಲ್ಲಿ ದಿನೇಶ್ ಅವರ ತಂದೆ ಕಣ್ಣೀರಿಟ್ಟರಂತೆ. ಅವರು ಅತ್ತಿದ್ದು ಕಾಯಿಲೆಯಿಂದಾಗಿಯಲ್ಲ ಈ ಸಮಾಜಿಕ ವ್ಯವಸ್ಥೆ ಬಡರೋಗಿಯನ್ನು ನಡೆಸಿಕೊಂಡ ಪರಿಗೆ. ಅಂದು ಡಾ. ದಿನೇಶ್ ತಮ್ಮ ತಂದೆಗೆ ಎರಡು ಮಾತು ಕೊಟ್ಟಿದ್ದರಂತೆ

1.     ಮುಂದೆ ತಾನು ಈ ಸಮಾಜದ ನಾಲ್ಕು ಜನರಿಗೆ ನೆರವಾಗುವಂತೆ ಬದುಕುತ್ತೇನೆ.
2.     ಕುಂದಾಪುರದಲ್ಲಿ ಉಚಿತವಾಗಿ ಔಷಧಿಯನ್ನು ನೀಡುವಂತ ಒಂದು ಆಸ್ಟತ್ರೆಯನ್ನು ಕಟ್ಟಿಸುತ್ತೇನೆ ಎಂದು.



ಮೊದಲನೆಯ ಮಾತಿನಂತೆ ದಿನೇಶ್ ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿದ್ದು 19 ದೇಶಗಳಲ್ಲಿ ಆ ಔಷಧಿ ರೋಗಿಗಳ ಮೇಲೆ ಪ್ರಯೋಗವಾಗುತ್ತಿದೆ. ಮತ್ತು ಮೆದುಳಿನ ಕ್ಯಾನ್ಸರ್ ಗೆ ಕಂಡುಹಿಡಿದರುವ ಔಷಧಿ ಇನ್ನೇನು ರೋಗಿಗಳ ಮೇಲೆ ಪ್ರಯೋಗಗೊಳ್ಳಲು ಸಿದ್ಧವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕವಾದರು ದಿನೇಶ್. ಎರಡನೇ ಮಾತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಆ ದಿನಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ತಾವು ಕ್ಯಾನ್ಸರ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದನ್ನು ವಿವರಿಸಿದರು.

ವಿಜ್ಞಾನಿಯಾಗ ಬೇಕಾದರೆ ಏನು ಓದಬೇಕು? ನಮ್ಮ ಮನಸ್ಥಿತಿಗಳು ಹೇಗಿರಬೇಕು? ಎಂದಮು 9ನೇ ತರಗತಿಯ ಜಿ. ಅನನ್ಯ ಕೇಳಿದ ಪ್ರಶ್ನೆಗೆ ದಿನೇಶ್ ಅವರು ಉತ್ತರ ನೀಡುತ್ತಾ, ವಿಜ್ಞಾನಿ ಎಂದರೆ ವಿಶೇಷವಾದ ಜ್ಞಾನವುಳ್ಳ ಎಲ್ಲರೂ ವಿಜ್ಞಾನಿಗಳೆ. ಆದರೆ ವಿಜ್ಞಾನದ ಪರಿಭಾಷೆಯಲ್ಲಿ ಅಂದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಜ್ಞಾನಿಯಾಗಬೇಕೆಂದರೆ ಮೊದಲು ಆಸಕ್ತಿ ಇರಬೇಕು, ಕುತೂಹಲ ಇರಬೇಕು, ತಾಳ್ಮೆ ಸಹನೆ ಇರಬೇಕು. ಸೋಲು ಗೆಲುವುಗಳನ್ನು ಸ್ವೀಕರಿಸುವ ಗುಣವಿರಬೇಕು, ಉತ್ಸಾಹವಿರಬೇಕು, ಸಮಾಜಕ್ಕಾಗಿ ಏನಾದರೂ ಒಳಿತನ್ನು ನೀಡಬೇಕೆಂಬ ಹಂಬಲವನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಪಡಬೇಕು. ಮುಖ್ಯವಾಗಿ ತನಗೆ ಆಸಕ್ತಿಯಿದೆಯೇ ಎಂದು ತನ್ನನ್ನು ತಾನು ಗುರುತಿಸಿಕೊಳ್ಳಬೇಕು.




ಒಂದರಿಂದ ಹತ್ತನೇ ತರಗತಿಯವರೆಗಿನ ಜ್ಞಾನ ಮೂಲಜ್ಞಾನ. ಈ ಮೂಲಜ್ಞಾನವನ್ನು ಮನಸ್ಸಿನಲ್ಲಿ ಉಳಿಯುವಂತೆ ಓದಬೇಕು. ಪರೀಕ್ಷೆಯಲ್ಲಿ ಗಳಿಸುವ ಅಂಕ ನಮ್ಮ ಜ್ಞಾನದ ಪ್ರತಿಫಲ ಅಲ್ಲ, ನಮ್ಮ ನೆನಪಿನ ಶಕ್ತಿಯ ಸಾಮರ್ಥ್ಯ. ವಿದ್ಯಾರ್ಥಿಗಳಲ್ಲಿ ಮೂರು ವಿಧ.
1)    ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇದ್ದರೆ ತನ್ನ ಪಾಲಿಗೆ ಜೀವನವೇ ಮುಗಿದು ಹೋಯ್ತು ಎಂದು ತಿಳಿದವರು.
2)    ಪರೀಕ್ಷೆಯನ್ನು ಗಂಭೀರವಾಗಿಯೇ ಸ್ವೀಕರಿಸಿ ತಮ್ಮ ಪ್ರಯತ್ನ ಮಾಡ್ತಾರೆ ತಾವು ನಿರೀಕ್ಷಿಸಿದಷ್ಟು ಅಂಕ ಬರದಿದ್ದಲ್ಲಿ ಅದನ್ನು ಧನಾತ್ಮಕವಾಗಿ ಸ್ವೀಕರಿಸುತ್ತಾರೆ.
3)    ಯಾವುದನ್ನೂ ಗಂಭೀರವಾಗಿ ಸ್ವೀಕರಿಸದೆ ತಮ್ಮ ಪಾಡಿಗೆ ತಾವಿರುವವರು.


ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರ್ಯಾರೂ ತುಂಬಾ ಚನ್ನಾಗಿ ಓದಿ ನೂರಕ್ಕೆ ನೂರು ಅಂಕಗಳಿಸಿದವರಲ್ಲ. ಹಾಗಾಗಿ ಯಾವಾಗಲೂ ಓದುವಾಗ ಜ್ಞಾನ ಸಂಪಾದನೆಗಾಗಿ ಓದಬೇಕು. ಜ್ಞಾನ ಸಂಪಾದನೆ ಮುಖ್ಯವಾದಾಗ ಓದುವ ಆಸಕ್ತಿ ಬೆಳೆಯುತ್ತದೆ, ಪ್ರೀತಿ ಹುಟ್ಟುತ್ತದೆ. ಓದನ್ನು ಎಂಜಾಯ್ ಮಾಡ್ತಿರ, ಹಾಗೆ ಕುಷಿಯಿಂದ ಓದಿದ್ದು ಜ್ಞಾನವಾಗಿ ಜೀರ್ಣವಾಗುತ್ತದೆ. ಆಗ ಪರೀಕ್ಷೆ ಬಹಳ ಸುಲಭವಾಗುತ್ತದೆ. ಜೀವನದಲ್ಲಿ ಯಾವುದೇ ಕೆಲಸ ಮಾಡಿ ಆದರೆ ಮುಖ್ಯವಾಗಿ ಪ್ರಯತ್ನ ಕಠಿಣ ಪರಿಶ್ರಮವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ.

Tuesday 25 February 2020

ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಇಡೀ ರಾಜ್ಯದ ಮಕ್ಕಳ ಮುಂದೆ ಒಂದು ಆದರ್ಶದ ದಾರಿಯನ್ನು ತೆರೆದಿಟ್ಟಿದ್ದಾರೆ. ಮಕ್ಕಳು ದನಿ ಎತ್ತಿದರೆ, ಹೆಗ್ಗಡಹಳ್ಳಿಯ ಮಕ್ಕಳ ರೀತಿ ಸಾತ್ವಿಕ ಪ್ರತಿಭಟನೆ ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಣ ಇಲಾಖೆಯವರು ಈ ಶಾಲೆಯನ್ನು ಗುರುತಿಸಿದ್ದಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಕಂಪೆನಿಗಳು ಗುರುತಿಸಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ತಿಳುವಳಿಕೆ ಬುದ್ಧಿ ಹೇಳಿರುವಂತ ಶಾಲೆ ಇದ್ದರೆ ಅದು ಹೆಗ್ಗಡಹಳ್ಳಿಯ ಶಾಲೆ. ಇಡೀ ರಾಜ್ಯದಲ್ಲಿ ಈ ರೀತಿಯ ಮತ್ತೊಂದು ಶಾಲೆ ಎಲ್ಲೂ ಇಲ್ಲ. ಅಂತಹ ಶಾಲೆಗೆ ನಾನಿಂದು ಬಂದಿದ್ದೇನೆ ಎಂದು ಹರ್ಷವ್ಯಕ್ತಪಡಿಸಿದರು. ಎರಡನೇ ಬಾರಿ ಈ ಶಾಲೆಗೆ ಬಂದಿದ್ದೇನೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೆಮ್ಮೆಯಿಂದ ಹೇಳಿದರು. 25-02-2020 ರಂದು ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು “ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಅಭಿಮಾನದ ಮಾತುಗಳನ್ನಾಡಿ ಎಂಟನೇ ಕಂತಿನ ಕಸವನ್ನು ಹತ್ತು ಕಂಪೆನಿಗಳಿಗೆ ಕಳಿಸುವ ಮಕ್ಕಳ ಚಳುವಳಿಗೆ ಬೆಂಬಲವಾಗಿ ನಿಂತರು.

ಪ್ಲಾಸ್ಟಿಕ್ ನಿಂದಾಗುವ ಅಪಾಯ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಬಿಡಲಿಕ್ಕೆ ಆಗುತ್ತಿಲ್ಲ. ಬಿಡದೆ ಇದ್ದರೆ ಅದು ಭಸ್ಮಾಸುರ ಆಗುತ್ತದೆ. ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ. ಕೇವಲ ಪ್ಲಾಸ್ಟಿಕ್ ವಿರುದ್ಧವಷ್ಟೇ ಅಲ್ಲ ಸಮಾಜದಲ್ಲಿ ನಡೆಯುವ ಯಾವುದೇ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆಯ ದನಿ ಇರಬೇಕು. ಮುಂದೆ ಪರೀಕ್ಷೆ ಹತ್ತಿರ ಬರುತ್ತಿದೆ ಚನ್ನಾಗಿ ಓದಿ. ಮೊಬೈಲ್ ನಿಂದ ದೂರವಿರಿ ಎಂದು ಹೇಳಿದರು. ಮಕ್ಕಳು ಇದೇ ಸಂದರ್ಭದಲ್ಲಿ ಜಗದ್ವಿಖ್ಯಾತ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಕುರಿತ ಪುಸ್ತಕವನ್ನು ನೀಡಿದರು. ನಿಮ್ಮಲ್ಲಿ ಯಾರು ಗ್ರೇಟಾ? ಎಂದು ಸಚಿವರು ಕೇಳಿದಾಗ “ನಾವೆಲ್ಲರೂ ಎಂದು ಉತ್ತರಿಸಿದರು.

ಶಾಸಕ ಶ್ರೀ ಹರ್ಷವರ್ಧನ್ ಮಾತನಾಡಿ ಎಸ್.ಎಸ್.ಎಲ್.ಸಿ. ಜೀವನದ ಅತ್ಯಂತ ಪ್ರಮುಖ ಪರೀಕ್ಷೆ ಚನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ. ಈ ಪ್ರಮಾಣಪತ್ರ ಬದುಕಿನುದ್ದಕ್ಕೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪರೀಕ್ಷಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ನಿಮ್ಮ ಕಸ ನಿಮಗೆ ಅಭಿಯಾನದ ಎಂಟನೇ ಕಂತಿನ ಕಸವನ್ನು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮತ್ತು ಶಾಸಕರು ಮತ್ತು ಮಕ್ಕಳು ಪೋಸ್ಟ್ ಮಾಸ್ಟರ್ ಸುರೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಾದ ಎ. ಎಂ. ಲಿಂಗರಾಜು ಅವರು ಹಾಜರಿದ್ದರು.




Monday 17 February 2020

LIVE INTERACTION WITH EDUCATION MINISTER S. SURESH KUMAR IN GHS HEGGADAH...




ಶಿಕ್ಷಣ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಅವರೊಂದಿಗೆ ನೇರ ವಿಡಿಯೋ ಸಂವಾದ.

ನಮ್ಮ ಶಾಲೆಯಲ್ಲಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಪ್ರಸಿದ್ಧರೊಂದಿಗೆ ನೇರ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಯಿತು. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಕುರಿತು ಕಿವಿಮಾತು ಹೇಳಿ ಸರ್ ಎಂದು ಕೇಳಿಕೊಂಡಾಗ ಅವರು ಒಪ್ಪಿಕೊಂಡರು. ಅದರಂತೆ ಫೆಬ್ರವರಿ 6 ರಂದು ಮದ್ಯಾಹ್ನ 2:30 ಸಚಿವರು ಸಮಯ ನೀಡಿದರು. ಅವರು ಬೆಂಗಳೂರಿನಿಂದ ಲೈವ್ ಆಗಿ ನಮ್ಮ ಮಕ್ಕಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಅವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ನಡೆಯುತ್ತಿರುವ ಪರೀಕ್ಷೆಯ ತಯಾರಿ ಕುರಿತು ಮಾಹಿತಿ ಪಡೆದರು.
ವಿಡಿಯೋ ಕರೆಯ ಮೂಲಕ ಹೀಗೆ ಸಂವಾದ ನಡೆಸುವುದು ಸಾಧ್ಯವಾಗಿದ್ದು ತಂತ್ರಜ್ಞಾನ ಮತ್ತು ಶಿಕ್ಷಕರ ಮೇಲೆ ನಂಬಿಕೆ, ಶಿಕ್ಷಕರನ್ನು ಹುರುದುಂಬಿಸುವ ಸಚಿವರಿಂದಾಗಿ. ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು ಗಮನಿಸಿದ ತಕ್ಷಣ ಅಂತಹ ಶಾಲೆ, ಶಿಕ್ಷಕರನ್ನು ಸಂಪರ್ಕಿಸಿ ಬೆನ್ನುತಟ್ಟುವ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಶಿಕ್ಷಕರ ಅಚ್ಚುಮೆಚ್ಚಿನ ಸಚಿವರಾಗಿದ್ದಾರೆ.
ನಮ್ಮ ಶಾಲೆಯ ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಪತ್ರಿಕೆಗಳಲ್ಲಿ ಬಂದ ಸುದ್ಧಿಯನ್ನು ನೋಡಿ ನಮ್ಮ ಶಾಲೆಯನ್ನು ಹುಡುಕಿಕೊಂಡು ಬಂದಿದ್ದರು. ಅಲ್ಲಿಂದ ನಮ್ಮ ಶಾಲೆಯ ಬಗ್ಗೆ ಗಮನಿಸುತ್ತಾ, ಶೈಕ್ಷಣಿಕ ಮಾಹಿತಿಗಳನ್ನು ಆಗಾಗ ತಿಳಿದು ಮೆಚ್ಚುಗೆ ಸೂಚಿಸುತ್ತಿದ್ದರು. ಹಾಗಾಗಿಯೇ ಮಕ್ಕಳೊಂದಿಗೆ ನೇರ ಸಂವಾದಕ್ಕೆ ಕೇಳಿಕೊಂಡಾಗ ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು. ಹೀಗೆ ಶಿಕ್ಷಣ ಸಚಿವರೊಂದಿಗೆ ನೇರ ಸಂವಾದ ನಮ್ಮ ಶಾಲೆಯಲ್ಲಿ ಸಾಧ್ಯವಾಯಿತು. ಅದಕ್ಕಾಗಿ ಸಚಿವರಿಗೆ ಮಕ್ಕಳೆಲ್ಲರ ಪರವಾಗಿ ವಂದನೆಗಳು.

ನಮ್ಮ ಶಾಲೆಯ ಸಂವಾದ ನಂತರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಚಿವರು ಬರೆದ ಬರಹ